ಹಂಪಿ : ಇಲ್ಲಿಗೆ ಸಮೀಪದ ಸಾಣಾಪುರ ಕೆರೆ ಬಳಿ ಕಳೆದ ವರ್ಷ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ (ಮರಣದಂಡನೆ) ವಿಧಿಸಲಾಗಿದೆ.
ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಅಲಿಯಾಸ್ ಚೈತನ್ಯ ಸಾಯಿ, ಶರಣಪ್ಪ ಅಲಿಯಾಸ್ ಶರಣು ಬಸವರಾಜ್ ಶಿಕ್ಷೆಗೆ ಒಳಗಾದ ಆರೋಪಿಗಳು.
ಪ್ರಕರಣ ಹಿನ್ನೆಲೆ
2025ರ ಮಾರ್ಚ್ 6 ರಾತ್ರಿ, ತುಂಗಭದ್ರಾ ಎಡದಂಡೆ ಕಾಲುವೆ ಬಳಿ ನಕ್ಷತ್ರ ವೀಕ್ಷಣೆಗೆಂದು ಇಸ್ರೇಲ್ ಮಹಿಳೆ ಪ್ರವಾಸಕ್ಕೆ ಬಂದಿದ್ದಳು. ಒಡಿಶಾ ಮೂಲದ ಬಿಬಾಶ್ ಎನ್ನುವ ಯುವಕ ಸಹ ಪ್ರವಾಸಕ್ಕೆ ಬಂದಿದ್ದ. ಇವರ ಜೊತೆಗೆ ಅಮೇರಿಕ, ಮಹಾರಾಷ್ಟ್ರ ರಾಜ್ಯದ ಪ್ರವಾಸಿಗರು ಸಹ ಇದ್ದರು. ಇವರೆಲ್ಲರನ್ನೂ ಸ್ಥಳೀಯ ಹೊಂ ಸ್ಟೇ ಮಾಲಕಿ ಮಹಿಳೆ ತಡರಾತ್ರಿ ವೇಳೆ ಸಾಣಾಪುರದಲ್ಲಿ ಕಾಲುವೆ ಪಕ್ಕದಲ್ಲಿ ಬೆಳದಿಂಗಳ ಸೌಂದರ್ಯ ನೋಡಲು ಕರೆದುಕೊಂಡು ಬಂದಿದ್ದಳು.
ಈ ವೇಳೆ ಪಾನಪತ್ತರಾಗಿ ಅದೇ ಮಾರ್ಗದಲ್ಲಿ ಬಂದಿದ್ದ ಅಪರಾಧಿಗಳು ಇಸ್ರೇಲ್ ಮಹಿಳೆ ಮತ್ತು ಹೊಂಸ್ಟೇ ಮಾಲಕಿ ಮೇಲೆ ಅತ್ಯಾಚಾರ ಎಸಗಿದ್ದರು. ಘಟನೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ, ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆ ನಡೆದ ಕೆಲವೇ ದಿನಗಳಲ್ಲಿ ಕೃತ್ಯ ಎಸಗಿದವರ ಬಂಧನವಾಗಿತ್ತು.





