ಮೈಸೂರು: ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣಕ್ಕಾಗಿ ಎದುರು ನೋಡುತ್ತಿರುವ ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.
ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಜೂನ್ಹಾಗೂ ಜುಲೈ ತಿಂಗಳ ಹಣ ಶೀಘ್ರದಲ್ಲೇ ಖಾತೆಗೆ ಜಮಾ ಆಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಇದರಿಂದ ವರಮಹಾಲಕ್ಷ್ಮಿ ಹಬ್ಬದ ತಯಾರಿಯಲ್ಲಿರುವ ಮಹಿಳೆಯರು ಮತ್ತಷ್ಟು ಸಂತೋಷಗೊಂಡಿದ್ದಾರೆ.
ಈಗಾಗಲೇ ಜೂನ್ತಿಂಗಳ ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು, ಇಂದಿನಿಂದ(ಆ.7) ರಾಜ್ಯದ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆಯಾಲಿದೆ. ವರಲಕ್ಷ್ಮಿ ಹಬ್ಬದ ವೇಳೆಗೆ ಬಹುತೇಕ ಎಲ್ಲಾ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
ಬೆಂಗಳೂರು, ಕೋಲಾರ, ಹಾವೇರಿ, ಕೊಪ್ಪಳ, ವಿಜಯಪುರ, ಗದಗ, ರಾಯಚೂರು, ಬೀದರ್, ಬೆಳಗಾವಿ, ಕಲಬುರ್ಗಿ, ಬಾಗಲಕೋಟೆ, ಚಿತ್ರದುರ್ಗ ಹಾಗೂ ಯಾದಗಿರಿ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ 533 ಕೋಟಿ ರೂಪಾಯಿ ಪಾವತಿಯಾಗಲಿದೆ. ಹೀಗಾಗಿ ಮಹಿಳೆಯರಿಗೆ ವರಮಹಾಲಕ್ಷ್ಮಿ ಹಬ್ಬ ಮತ್ತಷ್ಟು ಮೆರಗು ಪಡೆದುಕೊಳ್ಳಲಿದೆ.
ತಾಂತ್ರಿಕ ಕಾರಣದಿಂದ ಕಳೆದ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿರಲಿಲ್ಲ. ಎರಡು ತಿಂಗಳ ಹಣ ಇಂದೇ ಮನೆ ಒಡತಿಯರ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಲಿದ್ದು, ಇದರ ಬಗ್ಗೆ ಗೊಂದಲ ಬೇಡ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಮಂಡ್ಯದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕಾರ್ ಘೋಷಣೆ ಮಾಡಿದ್ದಾರೆ.