Mysore
30
clear sky

Social Media

ಗುರುವಾರ, 05 ಮಾರ್ಚ್ 2026
Light
Dark

ಮಾರ್ಚ್.‌11ರಿಂದ ಸರ್ಕಾರಿ ವೈದ್ಯರ ಮುಷ್ಕರ

ಬೆಂಗಳೂರು: ಸರ್ಕಾರದ ಶಿಸ್ತುಕ್ರಮಕ್ಕೂ ಕ್ಯಾರೆ ಎನ್ನದ ಸರ್ಕಾರಿ ವೈದ್ಯರು ತಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಮಾ.11ರಿಂದ ನಡೆಸಲು ಉದ್ದೇಶಿಸಿರುವ ಮುಷ್ಕರದಿಂದ ಹಿಂದೆ ಸರಿಯದಿರಲು ತೀರ್ಮಾನಿಸಿದ್ದಾರೆ.

ಕರ್ತವ್ಯಕ್ಕೆ ಗೈರು ಹಾಜರಾಗುವ ಸರ್ಕಾರಿ ಆಸ್ಪತ್ರೆಗಳ ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹಾಗೂ ಇಲಾಖೆಯ ಪ್ರಧಾನಕಾರ್ಯದರ್ಶಿ ಹರ್ಷಗುಪ್ತ ಎಚ್ಚರಿಕೆ ಕೊಟ್ಟಿದ್ದರು.

ಆದರೆ ಸರ್ಕಾರದ ಯಾವುದೇ ಎಚ್ಚರಿಕೆಗೂ ಬಗ್ಗದ ಕರ್ನಾಟಕ ವೈದ್ಯಕೀಯ ಸಂಘಗಳು ಈಗಾಗಲೇ ತೀರ್ಮಾನಿಸಿರುವಂತೆ ಮಾ.11ರಂದು ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಒಪಿಡಿ ಸೇವೆಯನ್ನು ಬಂದ್ ಮಾಡಿ ಅನಿರ್ದಿಷ್ಟ ಅವಧಿವರೆಗೆ ಮುಷ್ಕರವನ್ನು ನಡೆಸಲು ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.

ವೈದ್ಯರ ವಿರುದ್ಧ ಸರ್ಕಾರ ಶಿಸ್ತುಕ್ರಮ ಸೇರಿದಂತೆ ಸೇವೆಯಿಂದ ಅಮಾನತುಪಡಿಸುವುದು, ವಜಾಗೊಳಿಸುವುದು ಇಲ್ಲವೇ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ(ಎಸ್ಮಾ) ಜಾರಿ ಮಾಡಿದರೂ ಸರಿಯೇ ನಾವು ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ವೈದ್ಯರ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ಮಾತುಕತೆಗೆ ಆಹ್ವಾನಿಸಿದರೆ ಮಾತುಕತೆಗೆ ಸಿದ್ದರಿದ್ದೇವೆ. ಅದನ್ನು ಬಿಟ್ಟು ಶಿಸ್ತು ಕ್ರಮ ಇಲ್ಲವೇ ಕಾನೂನಿನ ಮೂಲಕ ಬೆದರಿಸಲು ಬಂದರೆ ನಾವು ಹೆದರುವುದಿಲ್ಲ ಎನ್ನುತ್ತಿದ್ದಾರೆ ವೈದ್ಯಾಧಿಕಾರಿಗಳು.

ನಾವು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು ನಿನ್ನೆ-ಮೊನ್ನೆಯದಲ್ಲ. ಹಲವಾರು ವರ್ಷಗಳ ಬೇಡಿಕೆ ಇದಾಗಿದೆ. ಈಗ ನಾಳೆ ಎನ್ನುತ್ತಲೇ ಕಾಲಹರಣ ಮಾಡುತ್ತಿದೆ. ನಾವು ಸಾಕಷ್ಟು ತಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಪುನಃ ಅದೇ ರೀತಿ ನಮನ್ನು ಬೆದರಿಸಲು ಬಂದರೆ ಈ ಬಾರಿ ಹೆದರುವುದಿಲ್ಲ ಎಂದು ಹೇಳುತ್ತಿದ್ದಾರೆ.

ನಮ್ಮನ್ನು ಜೈಲಿಗಟ್ಟಿದರೂ ಸರಿಯೇ. ಮುಷ್ಕರ ಕೈಬಿಡುವುದಿಲ್ಲ. ಸಚಿವರು ಮತ್ತು ಅಧಿಕಾರಿಗಳು ತಕ್ಷಣವೇ ಮಾತುಕತೆಗೆ ಆಹ್ವಾನಿಸಿದರೆ ಚರ್ಚೆಗೆ ಸಿದ್ದರಿದ್ದೇವೆ. ಆದರೆ ಸರ್ಕಾರ ನಮನ್ನು ಕಾನೂನಿನ ಮೂಲಕ ಕಟ್ಟಿ ಹಾಕಲು ಮುಂದಾದರೆ ನಮಗೂ ಕೂಡ ಕಾನೂನು ಮೂಲಕವೇ ಹೋರಾಟ ನಡೆಸಲು ಗೊತ್ತು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

 

 

 

Tags:
error: Content is protected !!