ಹುಬ್ಬಳ್ಳಿ : ನಾನೂ ಬಿಜೆಪಿಯಲ್ಲಿ ಇದ್ದು ಬಂದವನು. ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಆದ ಅನುಭವ ನನಗೂ ಆಗಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಇಂದು (ಗುರುವಾರ) ಹುಬ್ಬಳ್ಳಿಯಲ್ಲಿ ಜಾತಿ ಕಾರಣಕ್ಕೆ ನಾಗ್ಪುರದ ಆರ್ಎಸ್ಎಸ್ ಕಚೇರಿಯಲ್ಲಿರುವ ಹೆಡಗೇವಾರ್ ಸ್ಮಾರಕದೊಳಗೆ ಬಿಡಲಿಲ್ಲ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಮುಖ್ಯಮಂತ್ರಿ ಚಂದ್ರು, ಜಾತಿ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದರೆ ಅದು ಖಂಡನೀಯ ಎಂದರು.
ಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ಹಲವು ಸಭೆಗಳಿಗೆ ಆಹ್ವಾನವೇ ನೀಡುತ್ತಿರಲಿಲ್ಲ. ನಿಖರ ಕಾರಣ ಹೇಳದೆ ದೂರುವಿಡುತ್ತಿದ್ದರು. ಆದರೆ ಗೂಳಿಹಟ್ಟಿ ಶೇಖರ್ ಹೇಳಿಕೆ ನಂತರ ಮನವರಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಇದೇ ವೇಳೆ, ವೈಜ್ಞಾನಿಕವಾಗಿ ಮೀಸಲಾತಿ ಸೌಲಭ್ಯ ದೊರೆಯಲು ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.





