ಬೆಂಗಳೂರು: ಕೆಆರ್ಪಿಪಿ ಸಂಸ್ಥಾಪಕ ಗಾಲಿ ಜನಾರ್ಧ ರೆಡ್ಡಿ ಅವರು ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ, ಇಂದು (ಮಾ.೨೫) ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.
ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ತೆರಳಿದ ಜನಾರ್ಧನ ರೆಡ್ಡಿ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಂದ ಪಕ್ಷದ ಭಾವುಟ ಪಡೆದು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಪಕ್ಷಕ್ಕೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಹ್ವಾನಿಸಿದರು. ನನ್ನ ರಕ್ತದ ಕಣ ಕಣದಲ್ಲಿ ಬಿಜೆಪಿಯಿದೆ ಹಾಗಾಗಿ ನನ್ನ ಕೆಆರ್ಪಿಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಸೇರಿಕೊಂಡಿದ್ದೇನೆ ಎಂದು ವಿವರಿಸಿದರು.
ಬಿಎಸ್ವೈ ಸಿಎಂ ಆಗಿದ್ದಾಗ ನನ್ನನ್ನು ಸಚಿವನನ್ನಾಗಿ ಮಾಡಿ ಉನ್ನತ ಸ್ಥಾನಮಾನ ನೀಡಿದ್ದಾರೆ. ಈಗ ನಾನು ಯಾವುದೇ ಷರತ್ತು ವಿಧಿಸದೇ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿಗೆ ಸೇರಿಕೊಂಡಿದ್ದೇನೆ. ನನಗರ ಯಾವುದೇ ಹುದ್ದೆಯ ಆಸೆಯಿಲ್ಲ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಕೆಲಸ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಶ್ರೀರಾಮುಲುಗೆ ಧನ್ಯವಾದ ಅರ್ಪಿಸಿದರು.
ಜನಾರ್ಧನ ರೆಡ್ಡಿ ಪಕ್ಷಕ್ಕೆ ವಾಪಾಸಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಜನಾರ್ಧನ ರೆಡ್ಡಿ ಅವರನ್ನು ಸರಿಯಾಗಿ ಬಳಸಿಕೊಳ್ಳಲಾಗುವುದು. ಪ್ರಧಾನಿ ಮೋದಿ ನಾಯಕತ್ವ ಮೆಚ್ಚಿ ಪಕ್ಷಕ್ಕೆ ಬಂದಿರುವುದು ಸಂತೋಷದ ವಿಷಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜನಾರ್ಧನ ರೆಡ್ಡಿ ಅವರ ವಾಪಾಸಾತಿಗೆ ಹರ್ಷ ವ್ಯಕ್ತಪಡಿಸಿದರು.