ಬೆಂಗಳೂರು: ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತದೆ, ಅದರಲ್ಲಿಯೇ ಆ ಇಬ್ಬರ ಸಚಿವರ ಬಗ್ಗೆ ತಿಳಿಯಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು(ಮಾರ್ಚ್.10) ಶಾಸಕ ಸುನೀಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಜಿ.ಪರಮೇಶ್ವರ್ ಅವರು, ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಕನ್ನಡಿಗರು ಅಂದುಕೊಳ್ಳುವಷ್ಟು ಸುಲಭವಾಗಿಲ್ಲ. ಈ ಪ್ರಕರಣಕ್ಕೂ ರಾಜ್ಯ ಪೊಲೀಸ್ ಇಲಾಖೆಗೂ ಸಂಬಂಧವೇ ಇಲ್ಲ. ರನ್ಯಾ ಅವರನ್ನು ಬಂಧಿಸಿರುವುದು ಆದಾಯ ಗುಪ್ತಚರ ನಿರ್ದೇನಾಲಯ. ಹೀಗಾಗಿ ಆ ಇಲಾಖೆಯವರೇ ಸಿಬಿಐ ತನಿಖೆಗೂ ದೂರು ನೀಡಿದ್ದಾರೆ ಎಂದರು.
ಇನ್ನು ರಾಜ್ಯದ ಇಬ್ಬರು ಸಚಿವರ ಕೈವಾಡವಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದರ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಡಿಆರ್ಐ ತನಿಖಾ ತಂಡವೂ ನಮ್ಮ ಪೊಲೀಸ್ ಅಧಿಕಾರಿಗಳಿಗೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಪ್ರಕರಣದಲ್ಲಿ ನಾವು ಯಾವ ಪ್ರಭಾವಕ್ಕೂ ಒಳಗಾಗಿಲ್ಲ. ಸಚಿವರಿಬ್ಬರ ಕೈವಾಡ ಇದೇ ಎಂದರೆ ಅದು ಯಾವ ಸಚಿವರೆಂದು ಸಿಬಿಐ ತನಿಖೆಯಲ್ಲಿಯೇ ಗೊತ್ತಾಗಲಿದೆ ಎಂದು ಹೇಳಿದರು.
ಶಾಸಕ ಸುನೀಲ್ ಕುಮಾರ್ ಅವರ ಪ್ರಶ್ನೆ ಏನು?
ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಚಿವರಿಬ್ಬರ ಕೈವಾಡವಿದೆ. ಅದು ಯಾವ ಸಚಿವರೆಂದು ತನಿಖೆ ಮಾಡಲು ರಾಜ್ಯ ಸರ್ಕಾರದಿಂದ ಸಿಬಿಐ ತನಿಖೆಗೆ ವಹಿಸಬೇಕು. ಅಲ್ಲದೇ ಆ ನಟಿ ವಿದೇಶಕ್ಕೆ ಹೋಗುವಾಗ ಯಾವುದೇ ತಪಾಸಣೆ ಇಲ್ಲದೇ, ಅಧಿಕಾರಿಗಳೇ ರಕ್ಷಣೆ ನೀಡುತ್ತಿದ್ದರು ಅಂದರೆ ಏನು ಅರ್ಥ ಎಂದು ಪ್ರಶ್ನಿಸಿದ್ದರು.





