ಬೆಂಗಳೂರು: ಬಿಜೆಪಿಯರಿಗೆ ರಾಜ್ಯ ಸರ್ಕಾರದ ಯಶಸ್ಸು ಸಹಿಸೋಕೆ ಆಗುತ್ತಿಲ್ಲ. ಹಾಗಾಗಿ ನಮ್ಮ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪಮೇಶ್ವರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಏಪ್ರಿಲ್.7) ಬಿಜೆಪಿ ಜನಾಕ್ರೋಶ ಯಾತ್ರೆ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರಿಗೆ ನಮ್ಮ ಸರ್ಕಾರದ ಯಶಸ್ಸು ತಡೆದುಕೊಳ್ಳಲು ಆಗುತ್ತಿಲ್ಲ. ನಮ್ಮ ರಾಜ್ಯ ಸರ್ಕಾರ ಎರಡು ವರ್ಷದಿಂದ ಒಳ್ಳೆಯ ಆಡಳಿತ ನಡೆಸಿದೆ. ಅಲ್ಲದೇ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಜನತೆಗೆ ನೆಮ್ಮದಿ ತಂದಿದೆ. ಆದರೆ ರಾಜ್ಯದ ಯಾವ ಜನರು ಆಕ್ರೋಶ ವ್ಯಕ್ತಪಡಿಸುತ್ತಿಲ್ಲ. ಹೀಗಾಗಿ ಬಿಜೆಪಿಯವರೇ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ರಾತ್ರಿ ವೇಳೆ ರಸ್ತೆಯಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಪ್ರಕರಣ ಸಂಬಂಧಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಬೆಂಗಳೂರು ದೊಡ್ಡ ಸಿಟಿಯಾಗಿದೆ. ಈ ದೊಡ್ಡ ಸಿಟಿಯಲ್ಲಿ ಪ್ರತಿನಿತ್ಯವೂ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಹಾಗಾಗಿ ನಿತ್ಯವೂ ಪೊಲೀಸ್ ಕಮಿಷನರ್ ಎಚ್ಚರಿಕೆಯಿಂದ ಇರಬೇಕು ಎಂದರು.
ನಗರಾದ್ಯಂತ ಪೊಲೀಸರು ಬೀಟ್ ವ್ಯವಸ್ಥೆ ಚೆನ್ನಾಗಿ ಮಾಡಬೇಕು ಹಾಗೂ ಪ್ರತಿ ಏರಿಯಾಗೆ ಮಾಡಬೇಕೆಂದು ಈಗಾಗಲೇ ಹೇಳಿದ್ದೇನೆ. ಇನ್ನೂ ಅಲ್ಲೊಂದು ಇಲ್ಲೊಂದು ಘಟನೆ ಇಂತಹ ಘಟನೆಗಳು ನಡೆಯುತ್ತವೆ. ಆದರೆ ನಾವು ಅಷ್ಟೆಕ್ಕೆ ನಾವು ಬಿಡುವುದಿಲ್ಲ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಹೀಗಾಗಿ ಬೆಂಗಳೂರು ಶಾಂತವಾಗಿ ಇದೆ. ಬೀಟ್ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿ ಮಾಡುವಂತೆ ಕಮಿಷನರ್ಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.





