ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿ ಬಂಧಿಯಾಗಿದ್ದ ಚಿತ್ರದುರ್ಗದ ಮುರುಘಾಶ್ರೀ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸೋಮವಾರ ಬಿಡುಗಡೆಯಾಗಿದ್ದಾರೆ.
ಮುರುಘಾಶ್ರೀ ಹಲವು ತಿಂಗಳುಗಳಿಂದ ಫೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ಕಾರಾಗೃಹದಿಂದ ಬಂಧನ ಮುಕ್ತಗೊಳಿಸಿದೆ.
ಜೈಲಿನಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಪ್ರಥಮ ಬಾರಿಗೆ ಮಾತನಾಡಿದ ಮುರುಘೇಶ್ರೀ, ಬಸವೇಶ್ವರನ ಆರ್ಶೀವಾದದಿಂದ ನಾನು ಇಂದು ಬಂಧನದಿಂದ ಬಿಡುಗಡೆಯಾಗಿದ್ದೇನೆ. ಈ ಸಮಯದಲ್ಲಿ ಅಧಿಕವಾಗಿ ಮಾತನಾಡುವುದಕ್ಕಿಂತ ಮೌನವಾಗಿರುವುದು ಉತ್ತಮ ಎನ್ನಿಸುತ್ತದೆ. ನನಗೆ ಸಿಕ್ಕಿರುವ ಜಯವೂ ಸತ್ಯದ ಜಯವಾಗಿದೆ. ಸ್ವಾಮೀಜಿಗಳಿಗೆ ಸಹನೆ ಎಂಬುದು ಬಹಳ ಮುಖ್ಯವಾಗುತ್ತದೆ. ಹೀಗಾಗಿ ನಾನು ಸಹನೆ ಮತ್ತು ತಾಳ್ಮೆಯಿಂದ ಕಾದಿರುವುದಕ್ಕಾಗಿ ಜಯ ಸಿಗುವ ನಿರೀಕ್ಷೆ ಇತ್ತು ಎಂದರು.
ನಾನು ಜೈಲು ಸೇರಿದ ನಂತರ ಐದು ಪುಸ್ತಕಗಳನ್ನು ಬರೆದಿರುವೆ ಹಾಗೂ ನಾಲ್ಕು ಪುಸ್ತಕಗಳನ್ನು ಓದಿರುವೆ. ಸಮಯ ಬಂದಾಗ ಐದು ಪುಸ್ತಕಗಳನ್ನು ಒಮ್ಮೆ ಬಿಡುಗಡೆ ಮಾಡಲಾಗುತ್ತದೆ. ಹೆಚ್ಚು ಮಾತನಾಡಲು ಇದು ಸಕಾಲ ಸಮಯವಲ್ಲ ಎಂದು ಹೇಳಿ ಕಾರಿನಲ್ಲಿ ದಾವಣಗೆರೆಯ ಕಡೆಗೆ ತೆರಳಿದ್ದಾರೆ.