ಬೀದರ್: 99 ಲಕ್ಷ ಸಾಲ ಹಿಂತಿರುಗಿಸದ ಆರೋಪದ ಮೇರೆಗೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಸವಕಲ್ಯಾಣ ನಗರ ಠಾಣೆಯಲ್ಲಿ ಉದ್ಯಮಿ ಸಂಜು ಸುಗುರೆ ಎಂಬುವವರು ದೂರು ನೀಡಿದ್ದಾರೆ.
ಕಳೆದ 2023ರ ಚುನಾವಣೆ ಸಂದರ್ಭದಲ್ಲಿ ಉದ್ಯಮಿ ಸಂಜು ಸುಗುರೆಯಿಂದ ಶಾಸಕ ಸಲಗರ್ ಅವರು ಚುನಾವಣೆ ವೆಚ್ಚಕ್ಕೆಂದು 99 ಲಕ್ಷ ರೂ ಸಾಲ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣ ವಾಪಸ್ ಕೊಡಿ ಎಂದು ಮನೆಗೆ ಹೋದರೆ ಅವಾಚ್ಯ ಶಬ್ಧಗಳಿಂದ ಬೈದು ಧಮ್ಕಿ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದು, ಸೆಪ್ಟೆಂಬರ್.19ರಂದು ಶರಣು ಸಲಗರ್ ನೀಡಿದ ಚೆಕ್ ಬ್ಯಾಂಕಿಗೆ ಹಾಕಿದ್ರೆ ವಾಪಸ್ ಬಂದಿದೆ.
ಕರ್ನಾಟಕ ಬ್ಯಾಂಕ್ನಲ್ಲಿದ್ದ ಶಾಸಕರ ಖಾತೆ ಮುಚ್ಚಲ್ಪಟ್ಟಿದೆ ಎಂದು ಮಾಹಿತಿ ನೀಡಿದ್ದು, ಬಳಿಕ ಶಾಸಕರ ವಿರುದ್ಧ ಬೆಂಗಳೂರಿನ ಎಸಿಜೆಎಂ ಕೋರ್ಟ್ನಲ್ಲಿ ಸಂಜು ಸುಗುರೆ ದಾವೆ ಹೂಡಿದ್ದರು.
ಕೋರ್ಟ್ ಸೂಚನೆ ಮೇರೆಗೆ ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಸಕರ ವಿರುದ್ಧ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.





