ಬೆಂಗಳೂರು : ಇಂದಿನ ಯುವ ಜನಾಂಗದಲ್ಲಿ ಹೆಚ್ಚುತ್ತಿರುವ ರೀಲ್ಸ್ ಹುಚ್ಚನ್ನು ಎನ್ಕ್ಯಾಶ್ ಮಾಡಿಕೊಳ್ಳುವ ಹೊಸ ಐಡಿಯಾವನ್ನು ಮುಜರಾಯಿ ಇಲಾಖೆ ಕಂಡುಕೊಂಡಿದೆ. ಇನ್ನು ಮುಂದೆ ಮುಜರಾಯಿ ದೇವಾಲಯಗಳಲ್ಲಿ ರೀಲ್ಸ್ ಮಾಡುವವರು ಕಡ್ಡಾಯವಾಗಿ ಶುಲ್ಕ ಪಾವತಿ ಮಾಡಬೇಕು ಎಂಬ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ.
ಸಿನಿಮಾ, ಧಾರವಾಹಿ, ಸಾಕ್ಷ್ಯಚಿತ್ರ ಹಾಗೂ ಸುದ್ದಿವಾಹಿನಿಗಳ ಚಿತ್ರೀಕರಣಕ್ಕೆ ಇನ್ನು ಮುಂದೆ ನಿಗದಿತ ಶುಲ್ಕ ಪಾವತಿಸಿ ಪೂರ್ವಾನುಮತಿ ಪಡೆಯಬೇಕು ಎಂದು ಮುಜರಾಯಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ 2003 ಹಾಗೂ 2013ರಲ್ಲಿ ಜಾರಿಗೊಂಡಿದ್ದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ದೇವಾಲಯಗಳಲ್ಲಿ ರೀಲ್ಸ್, ಯೂಟ್ಯೂಬ್ ಚಾನೆಲ್ಗಳ ಚಿತ್ರೀಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಗಳ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ. ಹೀಗಾಗಿ ಮತ್ತೆ ಹಿಂದಿನ ನಿಯಮಗಳನ್ನು ಪುನಃ ಜಾರಿಗೆ ತರುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹೊಸ ನಿಯಮದ ಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ದೇವಾಲಯಗಳಲ್ಲಿ ಶಿಸ್ತಿನ ವಾತಾವರಣ ಕಾಪಾಡುವ ಉದ್ದೇಶದಿಂದ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಹೊಸ ರೂಲ್, ರಾಜ್ಯದ ಎ, ಬಿ ಮತ್ತು ಸಿ ಗ್ರೇಡ್ ದೇವಸ್ಥಾನದಲ್ಲಿ ಚಿತ್ರಕರಣೆ ಮಾಡುವುದಕ್ಕೆ ಅನ್ವಯಿಸುತ್ತದೆ. ರಾಜ್ಯದಲ್ಲಿ 205 ಎ ಗ್ರೆಡ್, 193 ಬಿ ಗ್ರೇಡ್ ಹಾಗೂ 34,105 ಸಿ ಗ್ರೇಡ್ ದೇವಾಲಗಳು ಸೇರಿದಂತೆ ಒಟ್ಟು 34,563 ದೇವಾಲಯಗಳಿವೆ. ಈ ದೇಗುಲಗಳಲ್ಲಿ ಇನ್ನು ಮುಂದೆ ರೀಲ್ಸ್ ಮಾಡಬೇಕಾದರೆ, ಅಲ್ಲಿನ ಆಡಳಿತ ಮಂಡಳಿಗೆ ಪತ್ರ ಬರೆಯಬೇಕು, ಅನುಮತಿ ಸಿಕ್ಕನಂತರ ಶುಲ್ಕ ಪಾವತಿಸಿ ರೀಲ್ಸ್ ಮಾಡಬೇಕಾಗುತ್ತದೆ.
ನಗರದ ದೇವಸ್ಥಾನಗಳಲ್ಲಿ ಧಾರಾವಾಹಿ ಚಿತ್ರೀಕರಣಕ್ಕೆ 15 ಸಾವಿರ ರೂ, ಬೆಂಗಳೂರು ಹೊರತು ಪಡಿಸಿ ಉಳಿದ ಕಡೆಗಳ ದೇವಾಲಯಗಳಲ್ಲಿ ಚಿತ್ರೀಕರಣಕ್ಕೆ 10 ಸಾವಿರ ಪಾವತಿಸಬೇಕಾಗುತ್ತದೆ. ಸಾಕ್ಷ್ಯಚಿತ್ರ ಮಾಡಿದರೆ ದಿನಕ್ಕೆ 5 ಸಾವಿರ ರೂ. ಹಾಗೂ 5 ನಿಮಿಷಗಳ ರೀಲ್ಸ್ ಚಿತ್ರೀಕರಣಕ್ಕಾಗಿ 250 ರೂ. ಐದು ನಿಮಿಷಗಳ ನಂತರ ಗಂಟೆಗಳ ಆಧಾರದ ಮೇಲೆ ಶುಲ್ಕ ಪಾವತಿಸಬೇಕಾಗುತ್ತದೆ.





