Mysore
20
overcast clouds
Light
Dark

ಕಾಂಗ್ರೆಸ್‌ ಸರ್ಕಾರ ಪತನದ ಬಗ್ಗೆ ವಿ.ಸೋಮಣ್ಣ ಸ್ಪೋಟಕ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಹೆಚ್ಚು ದಿನ ಉಳಿಯಲ್ಲ. ಇನ್ನೂ 6 ತಿಂಗಳು ನಡೆಯುತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಎಚ್.ಡಿ ಕುಮಾರಸ್ವಾಮಿ ಸಾಹೇಬರಿಗೆ ತಿಳಿದಿರಬಹುದು ಅವರೇ ಹೇಳಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು(ಜೂ. 23) ನಡೆದ ರಾಜ್ಯ ಬಿಜೆಪಿಯಿಂದ ಬಿಜೆಪಿ-ಜೆಡಿಎಸ್‌ ಸಂಸದರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಬಿಜೆಪಿ-ಜೆಡಿಎಸ್‌ ಒಂದಾಗುವ ಬಹುಕಾಲ ನನಸಾಗಿದೆ. ಇದು ಕಾಂಗ್ರೆಸ್‌ನ ನಿದ್ರೆಗೆಡಿಸಿದೆ. ನಾವೆಲ್ಲಾ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮೋದಿ ಅವರನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ  ಬಿಜೆಪಿ ಸರ್ಕಾರ ಇದ್ದಾಗ ಪೆಟ್ರೋಲ್‌ ಬೆಲೆ 1 ರೂ ಜಾಸ್ತಿಯಾದಾಗ, ಕಾಂಗ್ರೆಸ್‌ ಹೇಗೆ ನಡೆದುಕೊಳ್ತು ಎಂದು ರಾಜ್ಯದ ಜನರಿಗೆ ತಿಳಿದಿದೆ. ಆದರೆ ಇದೀಗ ಕಾಂಗ್ರೆಸ್‌ ಅಧಿಕಾರದಲ್ಲಿದ್ದು ತೈಲ ಬೆಲೆಯನ್ನು 3 ರೂ.ಗಳನ್ನು ಹೆಚ್ಚಿಸಿದೆ. ಈ ವಂಚನೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ 18 ಸೀಟು ಬರುತ್ತೆ ಎಂದು ಜಂಭದ ಮಾತುಗಳನ್ನು ಆಡುತ್ತಿದ್ದರು. ಆ ಜಂಭದ ಮಾತಿಗೆ ರಾಜ್ಯದ ಜನತೆ  ಬುದ್ದಿ ಕಲಿಸಿದ್ದಾರೆ. ಸೋಮಣ್ಣ ಸೋಲುತ್ತಾರೆ ಎಂದು ಅಪಪ್ರಚಾರ ಮಾಡಿದರು. ಆದರೆ ನಾನು ಗೆದ್ದಿದ್ದೇನೆ. ಈ ಗೆಲುವು ಬಿಜೆಪಿ ಜೆಡಿಎಸ್‌ ಕಾರ್ಯಕರ್ತರದ್ದು ಎಂದು ಹೇಳಿದರು.