Mysore
23
clear sky

Social Media

ಮಂಗಳವಾರ, 10 ಮಾರ್ಚ್ 2026
Light
Dark

ಲಕ್ಕುಂಡಿಯಲ್ಲಿ ಮುಂದುವರಿದ ಉತ್ಖನನ : ಪ್ರಾಚ್ಯಾವಶೇಷಗಳು ಪತ್ತೆ

ಲಕ್ಕುಂಡಿ : ಕಳೆದ ಮೂರು ದಿನಗಳಿಂದ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಈಗಾಗಲೇ ಶಿವಲಿಂಗ ಮತ್ತು ಪಾಣಿಪೀಠದಂತಹ ಐತಿಹಾಸಿಕ ಕುರುಹುಗಳು ಪತ್ತೆಯಾಗಿವೆ.

ನಾಲ್ಕನೇ ದಿನದ ಶೋಧ ಕಾರ್ಯದಲ್ಲಿ ಮಣ್ಣಿನ ಪದರಗಳ ಅಡಿಯಲ್ಲಿ ವಿಶಿಷ್ಟ ಆಕೃತಿಯ ಕಲ್ಲಿನ ಆಯುಧ ದೊರೆತಿದ್ದು, ತಜ್ಞರ ಪರಿಶೀಲನೆಯ ನಂತರ ಇದು ಶಿಲಾಯುಗದ ಮಾನವರು ಬೇಟೆ ಅಥವಾ ರಕ್ಷಣಾ ಉದ್ದೇಶಕ್ಕಾಗಿ ಬಳಸುತ್ತಿದ್ದ ಕಲ್ಲಿನ ಕೊಡಲಿ ಎಂಬುದು ಸ್ಪಷ್ಟವಾಗಿದೆ.

ಶೋಧನಾ ಕಾರ್ಯದಲ್ಲಿ ಶಿಲಾಯುಗಕ್ಕೆ ಸೇರಿದ ಅತ್ಯಂತ ಪ್ರಾಚೀನ ಕಲ್ಲಿನ ಆಯುಧ ಪತ್ತೆಯಾಗಿರುವ ಬೆನ್ನಲ್ಲೇ, ಇದೀಗ ಉತ್ಖನನ ನಡೆಯುತ್ತಿರುವ ಸ್ಥಳದ ಪಕ್ಕದಲ್ಲಿರುವ ಕೋಟೆ ಗೋಡೆಯಲ್ಲಿ ಹುದುಗಿ ಹೋಗಿದ್ದ ಅಪಾರ ಪ್ರಮಾಣದ ಪ್ರಾಚ್ಯಾವಶೇಷಗಳು ಬೆಳಕಿಗೆ ಬಂದಿವೆ.

ಲಕ್ಕುಂಡಿಯ ಕಲಾತ್ಮಕ ಶ್ರೀಮಂತಿಕೆಯನ್ನು ಸಾರುವಂತೆ ಒಂದೊಂದು ಶಿಲೆಯೂ ಸುಂದರ ಶಿಲ್ಪಕಲೆಗಳನ್ನು ಹೊತ್ತಿದ್ದು, ಇತಿಹಾಸಾಸಕ್ತರು ಹಾಗೂ ಸಂಶೋಧಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವ ಈ ಶಿಲೆಗಳು, ಪ್ರಾಚೀನ ದೇವಾಲಯಗಳಲ್ಲಿ ಬಳಸಲಾಗಿದ್ದ ಅಪೂರ್ವ ಕಲಾಕೃತಿಗಳನ್ನು ಪ್ರತಿಬಿಂಬಿಸುತ್ತಿವೆ ಎನ್ನಲಾಗಿದೆ.

ಈ ಅನ್ವೇಷಣೆ ರಾಜ್ಯದ ಜನರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಕಲೆಗಳ ಶ್ರೀಮಂತ ನಾಡು ಎಂಬ ಖ್ಯಾತಿಯನ್ನು ಲಕ್ಕುಂಡಿ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಚಿನ್ನದಲ್ಲಿ ಮಾತ್ರವಲ್ಲ, ಕಲೆಗಳಲ್ಲೂ ಅಪಾರ ಶ್ರೀಮಂತಿಕೆ ಹೊಂದಿರುವ ಈ ನೆಲದ ಮಹತ್ವವನ್ನು ಈ ಶಿಲ್ಪಕಲೆಗಳು ಸಾರುತ್ತಿವೆ.

ಈ ಅಮೂಲ್ಯ ವಸ್ತು ಪತ್ತೆಯಾದ ತಕ್ಷಣ, ಉತ್ಖನನ ಮೇಲ್ವಿಚಾರಕರು ಅದನ್ನು ಸೂಕ್ಷ್ಮವಾಗಿ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಮುಚ್ಚಿ, ಹಾನಿಯಾಗದಂತೆ ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ. ಆಯುಧದ ಮೇಲೆ ಶೋಧ ದಿನಾಂಕ ಮತ್ತು ವಿವರಗಳು ಟ್ಯಾಗ್‌ ಮೂಲಕ ಲೇಬಲ್‌ ಮಾಡಲಾಗಿದ್ದು, ಭವಿಷ್ಯದಲ್ಲಿ ಅದನ್ನು ಅಧ್ಯಯನ ಮತ್ತು ಪ್ರದರ್ಶನಕ್ಕಾಗಿ ಉಪಯೋಗಿಸಲು ಸಿದ್ಧಪಡಿಸಲಾಗಿದೆ.

 

Tags:
error: Content is protected !!