ಬೆಂಗಳೂರು : ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಸಾಥ್ ನೀಡಿರುವ ಮೈತ್ರಿ ಪಕ್ಷ ಜೆಡಿಸ್ ಪೋಸ್ಟರ್ ವಾರ್ ಶುರುಮಾಡಿದೆ. ನಗರದ ಹಲವು ಕಡೆಗಳಲ್ಲಿ ‘ಸಾಕಪ್ಪ ಸಾಕು ಕಾಂಗ್ರೆಸ್’ ಪೋಸ್ಟರ್ ಗಮನ ಸೆಳೆಯುತ್ತಿದೆ.
ಬಸ್ ಗಳಲ್ಲಿ, ವಿಧಾನಸೌಧದ ಬೀದಿಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪೋಸ್ಟರ್ ಸಮರಕ್ಕಿಳಿದಿದೆ. ಬೆಲೆ ಏರಿಕೆಯನ್ನು ಕೂಡಲೇ ಇಳಿಕೆ ಮಾಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಪೋಸ್ಟರ್ನಲ್ಲಿ ಏನಿದೆ?
ಸಾಕಪ್ಪ ಸಾಕು ಕಾಂಗ್ರೆಸ್ ಎಂಬ ಹೆಸರಿನಲ್ಲಿ ಪೋಸ್ಟರ್ ಹಾಕಲಾಗಿದೆ. ಪೋಸ್ಟರ್ ನಲ್ಲಿ ಸ್ಕ್ಯಾನ್ ಮಾಡಲು ಅವಕಾಶ ನೀಡಲಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕಪ್ಪ ಸಾಕು ಕಾಂಗ್ರೆಸ್ ವೆಬ್ ಸೈಟ್ ತೆರೆದುಕೊಳ್ಳುತ್ತದೆ. ಇದರಲ್ಲಿ ಸರ್ಕಾರ ಬೆಲೆ ಏರಿಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.
ಅಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಫೋಟೋ ಹಾಕಿ ಹೆಂಗೆ ನಾವು ಸಚಿವರಿಗೆ ಹನಿಟ್ರ್ಯಾಪ್, ಹೈಕಮಾಂಡ್ ಗೆ ಹನಿಟ್ರ್ಯಾಪ್ ಹಾಗೂ ಜನರಿಗೆ ತೆರಿಗೆ ಟ್ರ್ಯಾಪ್ ಎಂದು ಬರೆಯಲಾಗಿದೆ.
ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ವತಿಯಿಂದ ಶನಿವಾರ ವಿಧಾನಸೌಧದ ಚಲೋ ಪ್ರತಿಭಟನೆ ನಡೆಯಲಿದೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಈ ಹಿಂದೆ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಪೇ ಸಿಎಂ ಅಭಿಯಾನ ನಡೆಸಿತ್ತು. ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ ಪೋಸ್ಟರ್ ಅಭಿಯಾನದ ಮೂಲಕ ಗಮನ ಸೆಳೆದಿತ್ತು. ಇದೀಗ ಅದೇ ತಂತ್ರಗಾರಿಕೆಯನ್ನು ಬಳಸಿಕೊಂಡು ಜೆಡಿಎಸ್ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಿರುಗೇಟು ನೀಡಿದೆ.





