Mysore
20
overcast clouds
Light
Dark

ಸಭೆ ವೇಳೆ ವಿದ್ಯುತ್ ಸಮಸ್ಯೆ: ಸ್ಪಷ್ಟನೆ ನೀಡಿದ ಸಚಿವ ಕೆ.ಜೆ ಜಾರ್ಜ್‌

ಕೋಲಾರ: ಇಂಧನ ಇಲಾಖೆಗೆ ಸಂಬಂದಿಸಿದಂತೆ ತಮ್ಮ ನೇತೃತ್ವದಲ್ಲಿ ಸಭೆ ನಡೆಯುತ್ತಿರುವ ವೇಳೆ ಎರಡು ಬಾರಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, “ಇದು ಬೆಸ್ಕಾಂನಿಂದ ಆಗಿರುವ ಸಮಸ್ಯೆ ಅಲ್ಲ. ಜಿಲ್ಲಾ ಪಂಚಾಯ್ತಿಯಲ್ಲಿರುವ ಜನರೇಟರ್ ಕೈಕೊಟ್ಟಿದ್ದರಿಂದ ವಿದ್ಯುತ್ ಸ್ಥಗಿತಗೊಂಡಿದೆ” ಎಂದು ಸ್ಪಷ್ಟಪಡಿಸಿದರು.

ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ಜತೆ ಇಂದು (ಆ.30) ಸಭೆ ನಡೆಸಿ ಅವರು ಮಾತನಾಡಿದರು.

“ಸಭೆ ನಡೆಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜನರೇಟರ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಜನರೇಟರ್ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಅದು ಟ್ರಿಪ್ ಆಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಇದರಲ್ಲಿ ಬೆಸ್ಕಾಂ ಪಾತ್ರ ಏನೂ ಇಲ್ಲ. ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದ್ದು, ಪೂರೈಕೆಯಲ್ಲೂ ಯಾವುದೇ ಕೊರತೆ ಇಲ್ಲ. ಹೀಗಾಗಿ ಇಂಧನ ಸಚಿವರ ಸಭೆ ವೇಳೆ ವಿದ್ಯುತ್ ಕೈಕೊಟ್ಟಿದೆ ಎಂಬುದು ಸರಿಯಲ್ಲ. ಜನರೇಟರ್ ಸಮಸ್ಯೆಗೆ ಬೆಸ್ಕಾಂ ಜವಾಬ್ದಾರಿಯಾಗುವುದಿಲ್ಲ” ಎಂದರು.

ಕೋಲಾರ ಜಿಲ್ಲೆಗೆ 152 ಕೋಟಿ ರು. ಬಿಡುಗಡೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯಡಿ ಕೋಲಾರ ಜಿಲ್ಲೆಗೆ ಕಳೆದ ಒಂದು ವರ್ಷದಲ್ಲಿ 152 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ 4,12,732 ಗೃಹ ಬಳಕೆದಾರರಿದ್ದು, ಈ ಪೈಕಿ 3,92,965 ಮಂದಿ ಇದಕ್ಕೆ ಅರ್ಹರಾಗಿದ್ದಾರೆ. ಅವರಲ್ಲಿ 3,66,157 ಮಂದಿ ಯೋಜನೆಯ ಫಲಾನುಭವಿಗಳಾಗಿದ್ದು, ಶೇ. 93ರಷ್ಟು ಪ್ರಗತಿ ಸಾಧಿಸಲಾಗಿದೆ. ಇವರು ಬಳಸಿದ ವಿದ್ಯುತ್ತಿನ ಮೊತ್ತ 152 ಕೋಟಿ ರು.ಅನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

Tags: