ಬೆಂಗಳೂರು: ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡುತ್ತಿದ್ದಾಗ ವಿದ್ಯಾರ್ಥಿಯೊಬ್ಬ `ಏ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲʼ ಎಂದು ಹೇಳಿದ್ದಾನೆ. ಇದರಿಂದ ಶಿಕ್ಷಣ ಸಚಿವರಿಗೆ ತುಂಬಿದ ಸಭೆಯಲ್ಲಿ ಭಾರಿ ಮುಜುಗರ ಉಂಟಾಗಿದೆ.
ವಿಧಾನಸೌಧದಲ್ಲಿ ಇಂದು(ನ.20) ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ಮುಖಾಂತರ ನೀಟ್, ಜೆಇಇ ಮತ್ತು ಸಿಇಟಿಯ ಉಚಿತ ಕೋಚಿಂಗ್ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜೊತೆಗೆ ವಿದ್ಯಾರ್ಥಿಗಳು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ ನಡೆಸುತ್ತಿದ್ದರು. ಆ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ನೇರವಾಗಿ ಹೇಳಿದ್ದಾನೆ. ಆ ಮಾತು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ. ಎಲ್ಲರೂ ಒಂದು ಕ್ಷಣ ನಕ್ಕಿದ್ದಾರೆ. ವಿದ್ಯಾರ್ಥಿಯ ಮಾತನ್ನ ಗಂಭೀರವಾಗಿ ತೆಗೆದುಕೊಂಡ ಮಧು ಬಂಗಾರಪ್ಪ ಕೋಪಗೊಂಡು ಕ್ರಮಕ್ಕೆ ಸೂಚಿಸಿದ್ದಾರೆ.
ಕೋಪಗೊಂಡ ಮಧು ಬಂಗಾರಪ್ಪ ಯಾರೋ ಅದು ಹೇಳಿದ್ದು, ಏನೆಂದೂ ಹೇಳಿದ್ದು? ನಾನೇನು ಉರ್ದು ಮಾತನಾಡಿದ್ದ? ಕನ್ನಡದಲ್ಲೇ ತಾನೇ ಮಾತನಾಡಿದ್ದು ಎಂದು ಕಿಡಿಕಾರಿದ್ದಾರೆ. ಬಳಿಕ ಸಚಿವರ ಪಕ್ಕದಲ್ಲೇ ಇದ್ದ ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ.ರೂಪೇಶ್ ಹಾಗೂ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಯಾರು ನೋಡಿ ರೆಕಾರ್ಡ್ ಮಾಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ.





