Mysore
19
few clouds
Light
Dark

ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ: ಭಯದಿಂದ ಹೊರಗೆ ಬಂದ ಜನರು

ವಿಜಯಪುರ: ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಸೋಲದೇವನಹಟ್ಟಿ, ಘೋಣಸಗಿ, ಕಳ್ಳಕವಟಗಿ, ಹುಬನೂರು, ಟಕ್ಕಳಕಿ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಇಂದು ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರ ಓಡಿ ಬಂದಿದ್ದಾರೆ.

ಹಲವು ವರ್ಷಗಳಿಂದ ಪದೇ ಪದೇ ಭೂಮಿ ಕಂಪಿಸುತ್ತಿದೆ. ಜೊತೆಗೆ ನಿಗೂಢ ಶಬ್ಧಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದೇ ವರ್ಷದ ಮೊದಲ ತಿಂಗಳು ೨.೬ ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಭೂ ಕಂಪನಕ್ಕೆ ಮನೆಯ ಗೋಡೆ ಬಿರುಕುಬಿಟ್ಟಿದ್ದವು. ಮನೆಯಲ್ಲಿನ ಪಾತ್ರೆಗಳು ಕೆಳಗೆ ಬಿದ್ದಿದ್ದವು. ಕಳೆದ ನಾಲ್ಕೈದು ವರ್ಷಗಳಿಂದ ಭೂಕಂಪನ, ನಿಗೂಢ ಶಬ್ಧಕ್ಕೆ ಜಿಲ್ಲೆಯ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ. ಹಿಂದೆ ಕಂಪಿಸಿದ ಘಟನೆಯಿಂದ ಹಲವು ಕುಟುಂಬಗಳು ಊರು ತೊರೆದಿವೆ. ಇದೀಗ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಪದೇ ಪದೇ ಕಂಪಿಸಲು ಕಾರಣವೇನು ಎಂಬುದೇ ತಿಳಿಯದಾಗಿದೆ.