ಬೆಂಗಳೂರು: ಮತ್ತೊಮ್ಮೆ ಬಲಿಷ್ಠ ಬಿಜೆಪಿಯನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಲು ಎಲ್ಲರೊಂದಿಗೆ ಒಟ್ಟಾಗಿ ಹೋಗಲು ನಾನು ಸಿದ್ಧ. ಹಾಗಾಗಿ ಯತ್ನಾಳ್ ತಂಡದವರಿಗೆ ರೆಬೆಲ್ ಎಂದು ಯಾರೂ ಕೂಡ ಕರೆಯಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಹಾಗೂ ಮರುನೇಮಕದ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದರು.
ಇನ್ನೂ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧ್ಯಕ್ಷರ ಆಯ್ಕೆ ಆಗಬೇಕಿದೆ. ಉಳಿದ ಜಿಲ್ಲಾಧ್ಯಕ್ಷರ ಆಯ್ಕೆ ಎರಡು ಮೂರು ದಿನಗಳಲ್ಲಿ ಆಗಲಿದೆ. ಶೀಘ್ರದಲ್ಲೇ ಹೈಕಮಾಂಡ್ಗೆ ಜಿಲ್ಲಾಧ್ಯಕ್ಷರ ಪಟ್ಟಿ ರವಾನೆಯಾಗಲಿದೆ ಎಂದರು.
ನಮ್ಮ ಪಕ್ಷದ ಆಂತರಿಕ ಸಮಸ್ಯೆಗಳು ಕೇಂದ್ರದ ವರಿಷ್ಠರ ಗಮನಕ್ಕೆ ಬಂದಿದೆ. ಯಾರಿಗೆ ನೋಟಿಸ್ ಕೊಡಬೇಕಿತ್ತೋ ಅವರಿಗೆ ಕೊಟ್ಟಾಗಿದೆ. ಅವರು ಅದಕ್ಕೆ ಉತ್ತರ ಕೊಟ್ಟಿದ್ದಾರೆ. ರಾಜ್ಯದ ಹಾಗೂ ಜನರ ಹಿತದೃಷ್ಟಿ ಹಾಗೂ ಪಕ್ಷದ ಹಿತದೃಷ್ಟಿಯಿಂದ ಕೇಂದ್ರ ನಾಯಕರು ಈ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದರು.
ಇನ್ನು ನಾವು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಬಲಿಷ್ಠವಾಗಿ ಪ್ರತಿಷ್ಠಾಪಿಸಲು ಎಲ್ಲರೊಂದಿಗೆ ಒಟ್ಟಾಗಿ ಹೋಗಲು ಸಿದ್ಧರಿದ್ದೇವೆ. ಎಲ್ಲರೂ ಇದಕ್ಕೆ ಕೈಜೋಡಿಸಬೇಕು. ಆದ್ದರಿಂದ ರೆಬೆಲ್ ಎಂದು ಯತ್ನಾಳ್ ತಂಡದವರಿಗೆ ಅನ್ನಬೇಡಿ. ಅವರು ಪಕ್ಷ ಸಂಘಟನೆ ಸಭೆ ಮಾಡುತ್ತಿದ್ದಾರೆ ಎಂದು ನಾಳಿನ ರೆಬೆಲ್ ಟೀಂ ಸಭೆಯ ವಿಚಾರಕ್ಕೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು.





