Mysore
20
clear sky

Social Media

ಶನಿವಾರ, 14 ಫೆಬ್ರವರಿ 2026
Light
Dark

ರಾಮನನ್ನು ದಕ್ಷಿಣ ಭಾರತದಲ್ಲಿ ಪೂಜಿಸಲ್ಲ; ಸ್ಪಷ್ಟನೆ ನೀಡಿದ ಡಿಕೆಸು

ಖಾಸಗಿ ಚಾನೆಲ್‌ ನಡೆಸಿದ ಸಂದರ್ಶನವೊಂದರಲ್ಲಿ ʼರಾಮನನ್ನು ದೇವರು ಅಂತ ಹೇಳಿ ನಮ್ಮ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪೂಜೆ ಮಾಡುವುದಿಲ್ಲ. ನೀವು ಹಳ್ಳಿಗಳಲ್ಲಿ ಹೋಗಿ ನೋಡಿ. ಮನೆಗಳಲ್ಲಿ ಕೆಲವರು ಫೋಟೊಗಳನ್ನು ಸಹ ಇಡುವುದಿಲ್ಲʼ ಎಂದು ಡಿಕೆ ಸುರೇಶ್‌ ಹೇಳಿಕೆ ನೀಡಿದ್ದರು.

ಈ ಹೇಳಿಕೆಯ ವಿಡಿಯೊ ತುಣುಕನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಆರ್‌ ಅಶೋಕ್‌ ʼದಕ್ಷಿಣ ಭಾರತದಲ್ಲಿ ಯಾರೂ ರಾಮನನ್ನ ಪೂಜಿಸುವುದಿಲ್ಲವಂತೆ. ಡಿಕೆ ಸುರೇಶ್ ಅವರ ನುಡಿಮುತ್ತುಗಳನ್ನ ಒಮ್ಮೆ ಕೇಳಿಸಿಕೊಳ್ಳಿ. ಅವರ ದೇಶ ವಿಭಜನೆಯ ಮಾತು ಬಾಯಿ ತಪ್ಪಿ ಬಂದಿದ್ದಲ್ಲ. ಅದರ ಹಿಂದೆ ಬಹಳ ದೊಡ್ಡ ಮಸಲತ್ತು ಇದೆ. ಹಿಂದೂ ಧರ್ಮ ಒಡೆದರೆ ಮಾತ್ರ ದೇಶ ಒಡೆಯಲು ಸಾಧ್ಯ ಅಂತ ಬ್ರಿಟಿಷರಿಂದ, ಮೊಘಲರಿಂದ, ಟಿಪ್ಪುವಿನಿಂದ ಚೆನ್ನಾಗಿ ಕಲಿತಿರುವ ಕಾಂಗ್ರೆಸ್ ನಾಯಕರು, ಅದನ್ನ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಎಕ್ಸ್‌ನಲ್ಲಿಯೇ ಪ್ರತಿಕ್ರಿಯಿಸಿರುವ ಡಿಕೆ ಸುರೇಶ್‌ ʼಇಂದಿಗೂ ನಮ್ಮ ಹಳ್ಳಿಯ ಜನ ತಮ್ಮ ಜಾನಪದ ಪರಂಪರೆಯ ಮಾರಮ್ಮ, ಚೌಡಮ್ಮ, ಹುಲಿಗೆಮ್ಮ, ಯಲ್ಲಮ್ಮ, ಕಬ್ಬಾಳಮ್ಮ, ಮದ್ದೂರಮ್ಮ, ಮಾದಪ್ಪ, ಮುನೇಶ್ವರ, ಸಿದ್ದೇಶ್ವರ, ಭೂತ, ವರ್ತೆ, ಪಂಜುರ್ಲಿ ದೈವಗಳನ್ನೇ ತಮ್ಮ ಮನೆದೇವರಾಗಿ ಆರಾಧಿಸಿಕೊಂಡು ಬಂದವರು. ನಮ್ಮದು ಮೂಲ ದ್ರಾವಿಡ ಪರಂಪರೆ. ನಮ್ಮ ಹಳ್ಳಿಯ ಜನರ ಮನೆಗಳಲ್ಲಿ ಸಿಗುವುದು ನಮ್ಮ ಪರಂಪರೆಯ ದೈವಗಳು ನನ್ನ ಮಾತಿನ ಅರ್ಥವನ್ನು ತಿರುಚಿ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹರಿಬಿಡುವುದು, ಜನರನ್ನು ಭಾವನಾತ್ಮಕವಾಗಿ ಕೆಣಕುವುದು ಬಿಜೆಪಿ ಪಕ್ಷದ ಹಳಸಲು ಸಿದ್ಧಾಂತ. ಅಭಿವೃದ್ಧಿ, ಸಿದ್ಧಾಂತದ ಅಡಿಯಲ್ಲಿ ನಮ್ಮನ್ನು ಎದುರಿಸಲಾಗದ ನಿಮಗೆ ಸಿಗುವುದು ಇಂತವೇ ಪುರಾವೆಗಳು. ಜನ ದಡ್ಡರಲ್ಲ. ಈ ಚುನಾವಣೆ ನಿಮಗೆ ತಕ್ಕ ಪಾಠ ಕಲಿಸಲಿದೆ! ನೆನಪಿರಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

Tags:
error: Content is protected !!