ರಾಮನಗರ: ಡಿಸಿಎಂ ಡಿ.ಕೆ.ಶಿವಕುಮಾರ್ ಗೊಡ್ಡು ಬೆದರಿಕೆಗಳಿಗೆ ನಾನು ಹೆದರಲ್ಲ ಎಂದು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ರಾಮನಗರದಲ್ಲಿ ಮಾತನಾಡಿದ ಅವರು, ತಪ್ಪು ಮಾಡಿರುವುದು ನಾನಲ್ಲ ಅವರು. ಕಳೆದ ಕೆಲ ದಿನಗಳಿಂದ ನನ್ನನ್ನು ಗುಣಗಾನ ಮಾಡುತ್ತಿದ್ದಾರೆ. ಜನಾಂದೋಲನದಲ್ಲಿ ರಾಜ್ಯದ ಜನತೆ ಏನೆಲ್ಲಾ ಕಷ್ಟ ಪಡುತ್ತಿದ್ದಾರೆ ಎಂಬುದನ್ನು ಕುರಿತು ಚರ್ಚೆ ಮಾಡುವುದನ್ನು ಬಿಟ್ಟು ನನ್ನ ಬಗ್ಗೆ ಗುಣಗಾನ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ನನ್ನ ಕುಟುಂಬದ ಆಸ್ತಿ ದಾಖಲೆ ಬಗ್ಗೆ ಡಿಕೆಶಿ ಮಾತಾಡಿದ್ದಾರೆ. ಮಾಹಿತಿ ಬಿಚ್ಚಿಡುತ್ತೇನೆ ಎಂದೂ ಸಹ ಹೇಳಿದ್ದಾರೆ. ನನ್ನ ಬಗ್ಗೆ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ ಎಂದು ಸವಾಲು ಹಾಕಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಾವಿಗೀಡಾದ ಪಿಎಸ್ಐ ಪರಶುರಾಮ್ ಪತ್ನಿ ಗೋಳು ಅಷ್ಟಿಷ್ಟಲ್ಲ. ಆದರೆ ಮೃತ ಪಿಎಸ್ಐ ಪತ್ನಿಗೆ ಸರ್ಕಾರದಿಂದ ನ್ಯಾಯ ಕೊಡಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಮೊದಲು ಆಕೆಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕು. ಪರಶುರಾಮ್ ಸಾವಿನ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.





