ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ಲೋಕಸಭೆಯಲ್ಲಿ ಕಾಂಗ್ರೆಸ್ಗೆ ಮತ ಹಾಕದಿದ್ದರೆ, ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆ ರದ್ದು ಎಂಬ ಹೇಳಿಕೆಯನ್ನು ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆ ಕುರಿತು ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ನಮ್ಮ ಗ್ಯಾರಂಟಿ ಯೋಜನೆಗಳು 5 ವರ್ಷಗಳ ಕಾಲ ಮುಂದುವರಿಯಲಿವೆ. ಮಾಗಡಿ ಶಾಸಕ ಬಾಲಕೃಷ್ಣ ಎಚ್ಚರಿಕೆಯಿಂದಿರಿ ಎಂದಷ್ಟೇ ಹೇಳಿದ್ದಾರೆ. ಆದರೆ ಗ್ಯಾರಂಟಿ ನಿಲ್ಲಿಸುತ್ತಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದು ಹೇಳಿಕೆ ನೀಡಿದರು.
ಬಾಲಕೃಷ್ಣ ಹೇಳಿದ್ದೇನು?
ಮಾಗಡಿ ತಾಲೂಕಿನ ಶ್ರೀಗಿರಿಪುರ ಜನಸಂಪರ್ಕ ಸಭೆಯಲ್ಲಿ ಸಂಸದ ಡಿಕೆ ಸುರೇಶ್ ಪರ ಮತ ನೀಡುವಂತೆ ತಾಕೀತು ಮಾಡಿದ ಬಾಲಕೃಷ್ಣ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ರದ್ದು ಎಂದಿದ್ದರು. ಬಿಜೆಪಿಯವರು ಅಕ್ಷತೆ ಕಾಳು ನೀಡಿ ಮತ ಕೇಳುತ್ತಿದ್ದಾರೆ, ನಾವು ಗ್ಯಾರಂಟಿ ಯೋಜನೆಗಳನ್ನು ನೀಡಿ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಜನರಿಗೆ ಐದು ಗ್ಯಾರಂಟಿಗಳು ಇಷ್ಟವಿಲ್ಲ ಎಂದರ್ಥ. ಹಾಗಾಗಿ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆ ಸಹ ಚರ್ಚೆ ಮಾಡಿದ್ದೇನೆ ಎಂದಿದ್ದರು.
ನಿಮ್ಮ ಮತ ಅಕ್ಷತೆ ಕಾಳಿಗೋ ಅಥವಾ ಐದು ಗ್ಯಾರಂಟಿಗಳಿಗೋ ಎಂಬುದನ್ನು ಯೋಚನೆ ಮಾಡಿ. ಈ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದರೆ ಗ್ಯಾರಂಟಿ ಯೋಜನೆ ಮುಂದುವರಿಸುತ್ತೇವೆ. ಗೆಲ್ಲಿಸದೇ ಇದ್ದರೆ ಗ್ಯಾರಂಟಿ ಯೋಜನೆ ತಿರಸ್ಕಾರ ಮಾಡಿದ್ದಾರೆ ಎಂದಲ್ಲವೇ ಎಂದು ಬಾಲಕೃಷ್ಣ ಹೇಳಿದ್ದರು.





