ಬೆಂಗಳೂರು: ಸ್ಪೀಕರ್ ಪೀಠಕ್ಕೆ ಆಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ 18 ಶಾಸಕರನ್ನು 6 ತಿಂಗಳುಗಳ ಕಾಲ ಅಮಾನತು ಮಾಡಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಆದೇಶ ಹೊರಡಿಸಿದ್ದಾರೆ.
ವಿಧಾನಸಭೆಯ ಇತಿಹಾಸದಲ್ಲಿ ಮೊದಲ ಬಾರಿಗೆ 18 ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಆದೇಶ ನೀಡಿದ್ದಾರೆ.
ಮುಸ್ಲಿಂರಿಗೆ ಮೀಸಲಾತಿ ನೀಡುವ ವಿಧೇಯಕ್ಕೆ ವಿರೋಧ ಹಾಗೂ ಹನಿಟ್ರ್ಯಾಪ್ ಆರೋಪವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಸದನದ ಭಾವಿಗಿಳಿದು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿ ಸ್ಪೀಕರ್ ಯುಟಿ ಖಾದರ್ ಮೇಲೆ ಖಾಲಿ ಪೇಪರ್ ಎಸೆದಿದ್ದರು. ಸ್ಪೀಕರ್ ಪೀಠಕ್ಕೆ ಆಗೌರವ ತೋರಿದ ಹಿನ್ನಲೆಯಲ್ಲಿ ಬಿಜೆಪಿಯ ಶಾಸಕರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಅಮನತ್ತಾದ ಬಿಜೆಪಿ ಶಾಸಕರು ಇನ್ನು 6 ತಿಂಗಳವರೆಗೆ ವಿಧಾನಸಭೆಗೆ ಪ್ರವೇಶಿಸುವಂತಿಲ್ಲ. ಹಾಗೆಯೇ ಅವರ ದಿನದ ಭತ್ಯೆಗೂ ಕೋಕ್ ನೀಡಲಾಗಿದೆ. ಜೊತೆಗೆ ಸ್ಥಾಯಿ ಸಮಿತಿಗೆ ಅವಕಾಶಗಳಿಲ್ಲ ಎಂದು ಸ್ಪೀಕರ್ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ ಬಿಜೆಪಿ ಶಾಸಕರು:
ದೊಡ್ಡಗೌಡನ ಪಾಟೀಲ್, ಅಶ್ವತ್ ನಾರಾಯಣ್, ಎಸ್.ಆರ್.ವಿಶ್ವನಾಥ್, ಬಿಎ ಬಸವರಾಜ್, ಎಂ.ಆರ್.ಪಾಟೀಲ್, ಚೆನ್ನಬಸಪ್ಪ, ಬಿ.ಸುರೇಶಗೌಡ, ಉಮಾನಾಥ ಎ.ಕೋಟ್ಯಾನ್, ಶರಣು ಸರಲಗರ, ಸಿಕೆ ರಾಮಮೂರ್ತಿ, ಬಿಬಿ ಹರೀಶ್, ಮುನಿರತ್ನ, ಡಾ.ವೈ.ಭರತ್ ಶೆಟ್ಟಿ, ಬಸವರಾಜ ಮತ್ತಿಮೂಡ್, ಡಾ.ಚಂದ್ರು ಲಮಾಣಿ, ಡಾ.ಶೈಲೇಂದ್ರ ಬೆಲ್ದಾಳೆ, ಯಶಪಾಲ್ ಎ.ಸುವರ್ಣ, ಧೀರಜ್ ಮುನಿರಾಜು.





