ಮೈಸೂರು: ಸಮಗ್ರ ಶಿಕ್ಷಣ ಅಭಿಯಾನದಡಿ ನೀಡುವ ಅನುದಾನದಲ್ಲಿಯೂ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಅಡಿ ಪ್ರತಿ ಮಗುವಿಗೆ ಕೇಂದ್ರ ಸರ್ಕಾರವು ತಮಿಳುನಾಡು, ಗುಜರಾತ್ ಮೊದಲಾದ ರಾಜ್ಯಗಳಿಗೆ ವಾರ್ಷಿಕ 5500-6000 ರೂಪಾಯಿ ನೀಡುತ್ತಿದೆ. ಆದರೆ ಕರ್ನಾಟಕಕ್ಕೆ ಮಾತ್ರ ಪ್ರತಿ ಮಗುವಿಗೆ 2400-2800 ರೂಪಾಯಿ ನಿಗದಿ ಪಡಿಸಿದೆ. ಆ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಹಲವು ಬಾರಿ ಅಧಿಕಾರಿಗಳ ತಂಡ ದೆಹಲಿಗೆ ತೆರಳಿ ಈ ಸಂಬಂಧ ಮನವಿ ನೀಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವರ ಭೇಟಿಗೆ ನಾನೂ ಸಮಯ ಕೇಳಿದ್ದೇನೆ. ಆದರೆ ಈವರೆಗೆ ಅವಕಾಶ ದೊರೆತಿಲ್ಲ ಎಂದು ಹೇಳಿದರು.
ರಾಗಿ ಮಾಲ್ಟ್ ವಿತರಣೆ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲಿನೊಂದಿಗೆ ರಾಗಿ ಮಾಲ್ಟ್ ವಿತರಣೆಗೆ ಇನ್ನು 10-15 ದಿನದಲ್ಲಿ ಚಾಲನೆ ನೀಡಲಾಗುವುದು. ಮೈಸೂರಿನ ಸಿಎಫ್ಟಿಆರ್ಐ ನಿಂದ ಪ್ರಮಾಣಿಕೃತಗೊಂಡಿರುವ ರಾಗಿ ಮಾಲ್ಟನ್ನು ಕ್ಷೀರ ಭಾಗ್ಯ ಯೋಜನೆ ಅಡಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಲಾಗುವುದು. ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ಹಾಗೂ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುವುದು. ಈಗ ವಾರಕ್ಕೆ ಒಂದು ದಿನ ಮೊಟ್ಟೆ ನೀಡುತ್ತಿದ್ದು, ಇನ್ನೊಂದು ದಿನ ಹೆಚ್ಚಿಗೆ ನೀಡುವುದರಿಂದ 160 ಕೋಟಿ ಹೆಚ್ಚುವರಿ ಹಣ ಬೇಕಾಗುತ್ತದೆ. ಇದನ್ನು ಸಿಎಸ್ ಆರ್ ನಿಧಿಯಿಂದ ಸಂಗ್ರಹಿಸಲಾಗುವುದು ಎಂದರು.
ನೀಟ್ ತರಬೇತಿ: ಸರ್ಕಾರದಿಂದಲೇ ಕೇಂದ್ರಗಳನ್ನು ತೆರೆದು ಮಕ್ಕಳಿಗೆ ನೀಟ್ (NEET) ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.





