Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚುನಾವಣಾ ಕಣದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ!

ಧಾರವಾಡ: ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿರುದ್ಧ ಚುನಾವಣಾ ಆಖಾಡಕ್ಕೆ ಇಳಿಯಲು ಸಿದ್ದರಾಗಿದ್ದ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಅವರು ನಾಮಪತ್ರ ಹಿಂಪಡೆಯುವ ಮೂಲಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ತಮ್ಮ ಸೂಚಕರಾದ ಸಚ್ಚಿನ್‌ ಪಾಟೀಲ ಮತ್ತು ಅಮೃತ ಬಳ್ಳೋಳ್ಳಿ ಅವರ ಮೂಲಕ ಚುನಾವಣೆಗೆ ಸಲ್ಲಿಸಿದ್ದ ಅರ್ಜಿಯನ್ನು ವಾಪಾಸ್‌ ಪಡೆದಿದ್ದಾರೆ.

ಪ್ರಹ್ಲಾದ್‌ ಜೋಶಿ ಅವರಿಂದ ಹುಬ್ಬಳ್ಳಿ ಧಾರವಾಡ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ. ಜೋಶಿ ಅವರಿಂದ ನೋವು ಅನುಭವಿಸಿದ ಜನರ ಧನಿಯಾಗಿ ಹೋರಾಟ ಮಾಡುತ್ತೇವೆ. ಇವರ ಆಡಳಿತದಿಂದ ಅಭಿವೃದ್ಧಿಯ ವಿನಾಶವಾಗಲಿದೆ. ಲಿಂಗಾಯಿತ ಸಮುದಾಯದ ಹಿರಿಯರಾದ ಜಗದೀಶ್‌ ಶೆಟ್ಟರನ್ನು ಸರಿಯಾಗಿ ನೋಡಿಕೊಂಡಿಲ್ಲ ಹಾಗಾಗಿ ಜೋಶಿ ವಿರುದ್ಧ ಚುನಾವಣೆಗೆ ನಿಲ್ಲುವುದಾಗಿ ಶ್ರೀಗಳು ಹೇಳಿದ್ದರು.

ಒಲಿದ ಸಿಎಂ-ಡಿಸಿಎಂ ಮಂತ್ರ: ಇನ್ನು ದಿಂಗಾಲೇಶ್ವರ ಸ್ವಾಮಿಗಳು ಚುನಾವಣೆಗೆ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಡಿಸಿಎಂ ಅವರು ಶ್ರೀಗಳೊಂದಿಗೆ ಮಾತನಾಡಿದ್ದಾರೆ. ನೀವು ಚುನಾವಣೆಗೆ ಸ್ಪರ್ಧೆ ಮಾಡುವುದರಿಂದ ನಮ್ಮ ಅಭ್ಯರ್ಥಿಗೆ ಹೊಡೆತ ಬೀಳಲಿದೆ. ನೀವು ಸ್ಪರ್ಧಿಸುವ ಬಗ್ಗೆ ಮೊದಲೇ ಹೇಳಿದ್ದರೇ ನಾವೇ ಅನುಕೂಲ ಮಾಡಿಕೊಡುತ್ತಿದ್ದೆವು. ಈ ಬಾರಿ ವಿನೋದ್‌ ಅಸೂಟಿಯನ್ನು ಕಾಂಗ್ರೆಸ್‌ನಿಂದ ನಿಲ್ಲಿಸಿದ್ದು, ಅವರಿಗೆ ನಿಮ್ಮ ಬೆಂಬಲದ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

ಸಿಎಂ, ಡಿಸಿಎಂ ಅವರ ಮನವಿಗೆ ಒಪ್ಪಿದ ಶ್ರೀಗಳು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಚದುರುತ್ತಿದ್ದ ಕಾಂಗ್ರೆಸ್‌ ಮತಗಳು ಒಂದೆಡೆಗೆ ಕೇಂದ್ರೀಕೃತಗೊಂಡಿದೆ. ಇದು ಬಿಜೆಪಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

Tags: