ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಮುಸುಕುಧಾರಿಯ ಮುಸುಕು ತೆಗೆಯಿರಿ ಎಂದು ಬಿಜೆಪಿ ಆಗ್ರಹಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಪಕ್ಷ, ಧರ್ಮಸ್ಥಳ, ಪುಣ್ಯಸ್ಥಳ, ಪವಿತ್ರ ಸ್ಥಳಕ್ಕೆ ಆವರಿಸಿರುವ ಕಾರ್ಮೋಡವನ್ನು ಸರಿಸಲು ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಹೆಜ್ಜೆಯಿರಿಸಬೇಕಾಗಿದೆ. ಮುಸುಕು ಹಾಕಿಕೊಂಡಿರುವ ಅನಾಮಿಕನ ಮೇಲೆ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಿದರೆ ನಗರ ನಕ್ಸಲರ ಕೈವಾಡ ಬಯಲಾಗಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅವರು ಅನಾಮಿಕ ದೂರು ನೀಡಿದ ಕೂಡಲೇ ಅಮಾನಿಕನನ್ನೇ ಬ್ರೈನ್ ಮ್ಯಾಪಿಂಗ್ ಮಾಡಲು ಉದ್ದೇಶಿಸಿದ್ದೂ ಸರ್ಕಾರ ಎಡಪಂಥೀಯರ ಒತ್ತಡಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ಅವರು ತರಾತುರಿಯಲ್ಲಿ ಎಸ್ಐಟಿ ರಚಿಸಿ ಬ್ರೈನ್ ಮ್ಯಾಪಿಂಗ್ ಆಗದಂತೆ ನೋಡಿಕೊಂಡ ಪರಿಣಾಮ ಇಂದು ಪುಣ್ಯಕ್ಷೇತ್ರವೊಂದರ ಬಗ್ಗೆ ಅಪಪ್ರಚಾರ ನಡೆಯುತ್ತಿದೆ.
ಸರ್ಕಾರ ಕೇವಲ ಅನಾಮಿಕನ ಹಿಂದೆ ಬೀಳದೇ ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸುತ್ತಿರುವ ಎಲ್ಲರನ್ನೂ ಬಂಧಿಸಿ ತನಿಖೆ ನಡೆಸಬೇಕು. ನಂಬಿಕೆ ಹಾಳುಗೆಡಹುವ ದುಷ್ಟ ಶಕ್ತಿಗಳ ವಿರುದ್ಧ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಬಿಜೆಪಿ ಬೆಂಬಲಿಸಲಿದೆ ಹಾಗೂ ಯಾವುದೇ ಕ್ರಮಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೂ ಬಿಜೆಪಿ ಬದ್ಧವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.





