ಬೆಂಗಳೂರು: ಧರ್ಮಸ್ಥಳ ಪವಿತ್ರ ಧಾರ್ಮಿಕ ಸ್ಥಳವಾಗಿದ್ದು, ಭಕ್ತರು ಇಟ್ಟಿರುವ ನಂಬಿಕೆಗೆ ಧಕ್ಕೆಯಾಗಬಾರದು ಎಂದು ಜೆಡಿಎಸ್ ಶಾಸಕ ಎ.ಮಂಜು ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾಮಿಕ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆ ಮಾಡಿದೆ. ತನಿಖೆಗೆ ಸಂಪೂರ್ಣ ಸಹಕಾರವನ್ನು ಕೊಟ್ಟಿದೆ. ಧರ್ಮಸ್ಥಳದ ಸುತ್ತಮುತ್ತ ಹೂಳಲಾಗಿದೆ ಎನ್ನಲಾದ ಶವಗಳಿಗಾಗಿ ಎಸ್ಐಟಿ ಶೋಧವನ್ನು ಕೈಗೊಂಡಿದೆ. ತನಿಖೆಯ ನಂತರ ಯಾವ ಅಂಶಗಳು ಹೊರಬರುತ್ತವೋ ಕಾದು ನೋಡೋಣ ಎಂದರು.
ತಂತ್ರಜ್ಞಾನವನ್ನು ಬಳಸಿ ಅಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇದುವರೆಗೂ ಯಾವುದೇ ಗುರುತರವಾದ ಸಾಕ್ಷ್ಯ ಅಥವಾ ಅಸ್ತಿ ಸಿಕ್ಕಿಲ್ಲ ಎಂದು ವರದಿಯಾಗಿದೆ. ಈ ರೀತಿ ತಪ್ಪು ಮಾಹಿತಿ ನೀಡಿದ್ದರೆ ಅಂಥವರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು.
ಧರ್ಮಸ್ಥಳದಲ್ಲಿರುವ ದೇವರಿಗಾಗಲಿ, ಅಣ್ಣಪ್ಪಸ್ವಾಮಿಗಾಗಲಿ ಯಾವುದೇ ರೀತಿಯ ಕೆಟ್ಟದಾಗಲು ಈ ಸಮಾಜ ಒಪ್ಪುವುದಿಲ್ಲ. ಅಂತಹ ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ. ಒಂದು ವೇಳೆ ವೈಯಕ್ತಿಕವಾಗಿ ಯಾವುದಾದರೂ ತಪ್ಪುಗಳು ನಡೆದಿದ್ದರೆ ಎಸ್ಐಟಿ ತನಿಖೆಯಿಂದ ಸತ್ಯಾಂಶ ಹೊರಬರಲಿ ಎಂದರು.





