Mysore
20
overcast clouds
Light
Dark

ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ: ಕಣ್ಣೀರು ಹಾಕಿದ ರೇಣುಕಾಸ್ವಾಮಿ ತಂದೆ!

ಚಿತ್ರದುರ್ಗಾ: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲುಪಾಲಾಗಿರುವ ನಟ ದರ್ಶನ್‌ ಅವರು ಜೈಲಿನೊಳಗೆ ಖೈದಿಗಳೊಂದಿಗೆ ಟೀ ಕುಡಿಯುತ್ತಾ ಮಾತುಕತೆಯಲ್ಲಿ ತೊಡಗಿರುವ ವೀಡಿಯೋ ಸದ್ಯ ಸಖತ್‌ ವೈರಲ್‌ ಆಗುತ್ತಿದೆ.

ಈ ವಿಡಿಯೋ ತುಣುಕನ್ನು ನೋಡಿದ ರೇಣುಕಾಸ್ವಾಮಿ ತಂದೆ ಕಾಶಿನಾಥ್‌ ಶಿವನಗೌಡ ಕಣ್ಣೀರು ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ದರ್ಶನ್‌ ಅವರಿಗೆ ತಾವು ತಪ್ಪು ಮಾಡಿರುವ ಭಾವನೆ ಮೂಡಿರುವಂತೆ ಕಾಣುತ್ತಿಲ್ಲ. ರೆಸಾರ್ಟ್‌ನಲ್ಲಿ ಕುಳಿತಿರುವ ಹಾಗೆ ದರ್ಶನ್‌ ಕುಳಿತಿರುವುದನ್ನು ನೋಡಿ ನನಗೆ ಗಾಬರಿಯಾಗಿದೆ ಎಂದು ಭಾವುಕರಾದರು.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ನ್ಯಾಯಾಂಗದ ಬಗ್ಗೆ ನಮಗೆ ಇನ್ನು ನಂಬಿಕೆಯಿದೆ. ನಟ ದರ್ಶನ್‌ಗೆ ಈ ವ್ಯವಸ್ಥೆ ಮಾಡಿದವರಿಗೂ ಶಿಕ್ಷೆ ಕೊಡಿಸಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಡಾ. ಜಿ.ಪರಮೇಶ್ವರ್‌ ಅವರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಮಗನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದೇವೆ. ಆದರೆ ಆರೋಪಿಗಳು ಜೈಲಿನಲ್ಲಿ ಚೈನಿ ಹೊಡೆಯುತ್ತಿದ್ದಾರೆ. ಇದನ್ನು ನೋಡಿದರೇ ಸೂಕ್ತ ತನಿಖೆಗಾಗಿ ಸಿಬಿಐ ತನಿಖೆಗೆ ವಹಿಸಬೇಕು ಎಂದೆನಿಸುತ್ತಿದೆ. ಇಲ್ಲಿಯವರೆಗೆ ನಡೆದ ರೀತಿಯಲ್ಲಿಯೇ ತನಿಖೆ ಮುಂದುವರಿಯಲಿ ಎಂದು ಅವರು ಮನವಿ ಮಾಡಿದರು.