ಬೆಂಗಳೂರು: ಗೆದ್ದಾಗ ವಿದ್ಯುನ್ಮಾನ ಮತಯಂತ್ರಗಳನ್ನು ದೂರದೆ, ಚುನಾವಣೆಯಲ್ಲಿ ಸೋತಾಗ ದೂರುವುದನ್ನು ನಿಲ್ಲಿಸಿ ಫಲಿತಾಂಶವನ್ನು ಸ್ವೀಕರಿಸಿ. ಮತದಾನದ ವಿಧಾನದಲ್ಲಿ ನಂಬಿಕೆ ಇಲ್ಲದೇ ಇದ್ದರೆ ಪಕ್ಷಗಳು ಚುನಾವಣೆಯಲ್ಲೇ ಸ್ಪರ್ಧಿಸಬಾರದು ಎಂದು ಇಂಡಿ ಮೈತ್ರಿಕೂಟದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಾಂಗ್ರೆಸ್ಗೆ ನೇರವಾಗಿ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಇಂಡಿಯಾ ಪಕ್ಷ ಸೋಲು ಬಂದಾಗಲೆಲ್ಲ ಫಲಿತಾಂಶ ಒಪ್ಪಿಕೊಂಡ ನಿದರ್ಶನವೇ ಇಲ್ಲ. ಮೊದಲು ಬ್ಯಾಲೆಟ್ ಪೇಪರ್ ಇರುವಾಗಲೂ ಅಳುತ್ತಿದ್ದರು, ಈಗ ಇವಿಎಂ ಇರುವಾಗಲೂ ಸೋತಾಗ ಅಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಇವಿಎಂ ಸುರಕ್ಷಿತ, ವಿಶ್ವಾಸಾರ್ಹ ಎಂದು ಸುಪ್ರೀಂ ಕೋರ್ಟ್ನಲ್ಲೂ ಸಾಬೀತಾಗಿದೆ. ನಕಲಿ ಗಾಂಧಿ ಕುಟುಂಬ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಹೊಣೆಯಿಂದ ನುಣುಚಿಕೊಳ್ಳುವುದರಿಂದ ಕಾಂಗ್ರೆಸ್ ಪಕ್ಷ ಇಂದು ನೆಲಕಚ್ಚಿದೆ ಎಂದು ವ್ಯಂಗ್ಯವಾಡಿದೆ.





