ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವುದರ ಚರ್ಚೆಯ ಕುರಿತಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಅವರು ಕಾಂಗ್ರೆಸ್ ಸರ್ಕಾರ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ನಡೆಸುತ್ತಿದೆ ಎಂದಿದ್ದು ಜಾತಿಗೊಂದು ಡಿಸಿಎಂ ಸ್ಥಾನ ಕೊಟ್ಟುಬಿಡಿ. 30ರಿಂದ 35 ಡಿಸಿಎಂ ಸ್ಥಾನ ಶಾಸಕರಿಗೆ ಡಿಸಿಎಂ ಸ್ಥಾನ ಕೊಡುವುದು ಒಳ್ಳೆಯದು. ಆಗ ದಿನನಿತ್ಯ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾವುದೇ ಗೊಂದಲ ಇರುವುದಿಲ್ಲ ಎಂದರು.
ಈಗ ಗ್ಯಾರಂಟಿ ಯೋಜನೆಗಳನ್ನು ನೋಡಿಕೊಳ್ಳೋಕೆ ಓರ್ವ ಅಧ್ಯಕ್ಷನನ್ನು ನೇಮಿಸುತ್ತಿದ್ದಾರೆ. ಆ ಯೋಜನೆಗಳಿಗೆ ವಾರ್ಷಿಕ 16 ಕೋಟಿ ಹಣ ಬೇಕಂತೆ. ಇದಕ್ಕೆ ಐವರು ಉಪಾಧ್ಯಕ್ಷರು ಯಾಕೆ ಬೇಕು? ಕಾಂಗ್ರೆಸ್ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಕಾಂಗ್ರೆಸ್ ಪರಿಸ್ಥಿತಿ ನನಗೆ ಅರ್ಥವಾಗಿದೆ. ಚುನಾವಣೆ ಬಳಿಕ ಎಲ್ಲಾ ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ಹೇಳಿದರು.
ಇನ್ನು ಯುವನಿಧಿ ಯೋಜನೆಯ ನೋಂದಣಿ ಕುರಿತು ಮಾತನಾಡಿದ ಕುಮಾರಸ್ವಾಮಿ ಈ ಯೋಜನೆ ಕಾರ್ಯಕ್ರಮದಲ್ಲಿ ಏನೇನಿದೆ? ಎಷ್ಟು ಜನ ನೋಂದಣಿ ಮಾಡಿಕೊಂಡಿದ್ದಾರೆ? 2023-24ನೇ ಸಾಲಿನಲ್ಲಿ ಎಷ್ಟು ಜನ ಪದವಿ ಪಡೆದುಕೊಂಡಿದ್ದಾರೆ? ಅವರ ಗೈಡ್ಲೈನ್ಸ್ನಲ್ಲಿ ಏನಿದೆ ಎಂದು ಪ್ರಶ್ನೆ ಹಾಕಿದ್ದಾರೆ.




