ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಐದು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ಗೆ ಹೈಕೋರ್ಟ್ ಸಪ್ತ ಷರತ್ತುಗಳನ್ನು ವಿಧಿಸಿ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಈ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 57ನೇ ಸಿಸಿಎಚ್ ನ್ಯಾಯಾಲಯ ಎ2 ಆರೋಪಿ ದರ್ಶನ್ಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿತ್ತು. ಬಳಿಕ, ದರ್ಶನ್ ಪರ ವಕೀಲರು ಅನಾರೋಗ್ಯದ ಕಾರಣವನ್ನು ಮುಂದಿಟ್ಟುಕೊಂಡು ಜಾಮೀನಿಗಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸತತ ನಾಲ್ಕು ದಿನಗಳ ವಿಚಾರಣೆಯನ್ನು ನಡೆಸಿದ ನಂತರ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿದ್ದ ಏಕ ಸದಸ್ಯ ಪೀಠವು ಇಂದು (ಅಕ್ಟೋಬರ್.30) 45 ದಿನಗಳ ಜಾಮೀನನ್ನು ಮಂಜೂರು ಮಾಡಿದೆ.
ಹೈಕೋರ್ಟ್ ವಿಧಿಸಿರುವ ಸಪ್ತ ಷರತ್ತುಗಳೇನು?
1. ಸೆಷೆನ್ಸ್ ನ್ಯಾಯಾಲಯಕ್ಕೆ ಪಾಸ್ ಪೋರ್ಟ್ ಸೆರೆಂಡರ್ ಮಾಡುವುದು ಹಾಗೂ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬಾರದು.
2. ಒಂದು ವಾರದಲ್ಲಿ ವೈದ್ಯಕೀಯ ದಾಖಲಾತಿ ವರದಿಯನ್ನು ಸಲ್ಲಿಸಬೇಕು.
3. ಎರಡು ಲಕ್ಷ ರೂಪಾಯಿ ಬಾಂಡ್
4. ಇಬ್ಬರು ಶ್ಯೂರಿಟಿದಾರರು
5. ಸಾಕ್ಷಿ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆ ಹಾಕಬಾರದು
6. ಸಾಕ್ಷಿ ನಾಶಕ್ಕೆ ಪ್ರಯತ್ನ ಮಾಡಬಾರದು.
7. ಜಾಮೀನಿನ ದುರುಪಯೋಗ ಮಾಡಿಕೊಳ್ಳುವಂತಿಲ್ಲ.





