ಬೆಂಗಳೂರು: ಸಂವಿಧಾನ ಬದ್ದವಾದ ಒಕ್ಕೂಟ ತತ್ವಗಳು ಹಾಗೂ ದಕ್ಷಿಣ ರಾಜ್ಯಗಳ ಅಧಿಕಾರ ರಕ್ಷಿಸಲು ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಎಂಬ ತತ್ವ ವಿರೋಧಿಸಿ ಎಂಕೆ ಸ್ಟಾಲಿನ್ ಮಾ.22ರಂದು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಏರ್ಪಾಡು ಮಾಡಿದ್ದಾರೆ.
ಇದಕ್ಕೆ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದು, ರಾಜ್ಯಗಳ ಸ್ವಾಯತ್ತತೆ ಹಾಗೂ ಕ್ಷೇತ್ರ ಮರುವಿಂಗಡನೆ ಬಗ್ಗೆ ಮಹತ್ವದ ವಿಷಯಗಳನ್ನು ಎತ್ತಿದ ನಿಮ್ಮ ಪತ್ರ ನನಗೆ ತಲುಪಿದೆ. ಪೂರ್ವ ನಿಗದಿ ಕಾರ್ಯಕ್ರಮಗಳು ಇರುವ ಕಾರಣ ಮಾರ್ಚ್ 22ರ ಸಭೆಗೆ ಹಾಜರಾಗಲು ಸಾದ್ಯವಾಗುತ್ತಿಲ್ಲ.
ಆ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಎಂದು ʼಎಕ್ಸ್ʼ ನಲ್ಲಿ ಬರೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರ ನಡೆಸಲು ಹೊರಟಿರುವ, ಜನಸಂಖ್ಯಾ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಸಂಬಂಧ ತಮಿಳುನಾಡು ಜೊತೆಗೆ ಕೈ ಜೋಡಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕರ್ನಾಟಕ, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ, ಪಂಜಾಬ್, ಒಡಿಶಾ ಹಾಗೂ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯು ಅನ್ಯಾಯದ ಕಸರತ್ತು. ಇದರ ವಿರುದ್ಧ ನಿರಂತರ ಹೋರಾಟದ ಅಗತ್ಯವಿದೆ. ಇದಕ್ಕಾಗಿ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ಭಾಗವಾಗಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದರು.



