ಬೆಂಗಳೂರು: ವಿಧಾನ ಸೌಧ ಮುಂಭಾಗದಲ್ಲಿ ಇಂದು ( ಫೆಬ್ರವರಿ 8 ) ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಆಡಳಿತದ ಭರವಸೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಹಾಗೂ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸಲು ಜನಪರ ಮತ್ತು ಸ್ಪಂದನಶೀಲ ಆಡಳಿತದ ವಿಶ್ವಾಸವನ್ನು ಸಾರ್ವಜನಿಕರಲ್ಲಿ ಮೂಡಿಸುವುದು ಇದರ ಪ್ರಮುಖ ಗುರಿಯಾಗಿದೆ. ಈ ಕಾರ್ಯಕ್ರಮವು ಮುಖ್ಯಮಂತ್ರಿಗಳು ನಡೆಸುತ್ತಿರುವ ರಾಜ್ಯಮಟ್ಟದ ಎರಡನೇ ಕಾರ್ಯಕ್ರಮವಾಗಿದ್ದು, ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಪ್ರಯತ್ನದೊಂದಿಗೆ ಜನತಾ ದರ್ಶನವನ್ನು ವಿಧಾನಸೌಧದ ಶಕ್ತಿ ಕೇಂದ್ರದ ಮುಂದೆ ನಡೆಸುತ್ತಿರುವುದು ವಿಶೇಷವಾಗಿದೆ.
ರಾಜ್ಯದ ಹಲವು ಭಾಗಗಳಿಂದ ಈ ಕಾರ್ಯಕ್ರಮಕ್ಕೆ ಬರುವ ಜನರು ಸಮಸ್ಯೆಗಳನ್ನು ಹೊತ್ತು ತರುವ ಹಿನ್ನೆಲೆಯಲ್ಲಿ ಅವುಗಳನ್ನು ನಿರ್ವಹಿಸಲಿ ವ್ಯವಸ್ಥಿತವಾಗಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖಾ ವತಿಯಿಂದ ತಯಾರಿ ಮಾಡಿಕೊಂಡು ವಿಧಾನಸೌಧದ ಪೂರ್ವ ಭಾಗದ ಮೆಟ್ಟಿಲುಗಳನ್ನು ಭರ್ಜರಿಯಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಮುಖ್ಯಸ್ಥರು, ಕಾರ್ಯದರ್ಶಿಗಳು ಸ್ಥಳದಲ್ಲೇ ಹಾಜರಿದ್ದು, ಸಾರ್ವಜನಿಕರ ಸಮಸ್ಯೆ, ಕುಂದು ಕೊರತೆ, ಮತ್ತು ದೂರುಗಳನ್ನು ಆಲಿಸಿ ಸ್ಥಳದಲ್ಲೇ ಬಗೆಹರಿಸಿ ಪರಿಹಾರವನ್ನು ನೀಡುವ ಉದ್ದೇಶವಾಗಿದ್ದು , ಜನಸ್ಪಂದನಕ್ಕೆ ಬರುವ ಜನರಿಗಾಗಿ ಕುಡಿಯುವ ನೀರು, ಲಘು ಉಪಹಾರ ಸೇರಿದಂತೆ ಬೇರೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಡಿಪಿಎಆರ್ ಅಧಿಕಾರಿಗಳು ತಿಳಿಸಿದರು.





