ಬೆಂಗಳೂರು: ಡಿನ್ನರ್ ಮೀಟಿಂಗ್ ರುವಾರಿಯೇ ಸಿಎಂ ಸಿದ್ದರಾಮಯ್ಯ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿರುವಾಗಲೇ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆಪ್ತ ಸಚಿವರೊಂದಿಗೆ ಡಿನ್ನರ್ ಮೀಟಿಂಗ್ ನಡೆಸಿದ್ದರು.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು, ಡಿನ್ನರ್ ಮೀಟಿಂಗ್ ರುವಾರಿ ಸಿಎಂ ಸಿದ್ದರಾಮಯ್ಯ ಅವರೇ ಆಗಿದ್ದಾರೆ. ಔತಣಕೂಟ ಏರ್ಪಾಡು ಮಾಡುತ್ತಿರುವುದೇ ಸಿಎಂ ಸಿದ್ದರಾಮಯ್ಯ. 30 ತಿಂಗಳಿ ಆದ ಮೇಲೆ ಅಧಿಕಾರದಿಂದ ಕೆಳಗೆ ಇಳಿಯಬೇಕಲ್ಲಾ, ಅದಕ್ಕೆ ಏನೇನೋ ಆಟ ಆಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ತಪ್ಪಿಸಲು ಆಗಲ್ಲ. ಡಿಕೆಶಿ ಕಾಂಗ್ರೆಸ್ನಲ್ಲಿ 40 ವರ್ಷದಿಂದ ಇದ್ದಾಋೆ. ಅವರು ಯಾವುದೇ ಊರಿಗೆ ಹೋದರೂ ಕಾರ್ಯಕರ್ತರನ್ನು ಗುರುತಿಸುತ್ತಾರೆ. ಆ ಕಾರ್ಯಕರ್ತರು ಈ ಸಿದ್ದರಾಮಯ್ಯಗೆ ಗೊತ್ತೇ ಇಲ್ಲ. ಸಿದ್ದರಾಮಯ್ಯ ಚಮಚ, ಚೇಲಾಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಮೂಲಕ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಬ್ಯಾಟ್ ಬೀಸಿದ್ದು, ಡಿಕೆಶಿ ಸಿಎಂ ಆಗೇ ಆಗುತ್ತಾರೆ ಎಂಬ ಸುಳಿವು ನೀಡಿದ್ದಾರೆ.





