ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರ್ನಾಟಕವನ್ನು ಪಾಕಿಸ್ತಾನಕ್ಕಿಂತ ಕಡೆ ಮಾಡಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹನುಮಾನ್ ಚಾಲೀಸ್ ಪಠಾಣ್ ಮಾಡಿದವರ ಮೇಲೆ ಎಫ್ಐಆರ್ ಹಾಕುತ್ತೀರಿ. ಇದು ಸರಿಯಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಯಾರು ಬೇಕಾದರೂ 6 ಗಂಟೆಗೆ ಎದ್ದು ನಮಾಜ್ ಮಾಡಬಹುದು. ನೀವು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದೀರಾ ಅಥವಾ ಇದನ್ನು ಇಸ್ಲಾಮಿಕ್ ರಾಷ್ಟ್ರ ಅಂದ್ಕೊಂಡಿದ್ದೀರಾ ಎಂದ ಅವರು ಸಿಎಂ ಸಿದ್ದರಾಮಯ್ಯನವರ ನಡೆಯನ್ನು ಖಂಡಿಸುತ್ತೇನೆ. ಇದು ವೋಟ್ಬ್ಯಾಂಕ್ ರಾಜಕಾರಣ ಎಂದರು.
ನನ್ನ ಮಕ್ಕಳು ರಾಹುಲ್ ಗಾಂಧಿ ತರ ಆಗಬೇಕೆಂಬ ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, ಅವರು ಹಾಗೆ ಹೇಳದೆ ಹೋದರೇ ಅವರ ನೌಕರಿ ಹೋಗುತ್ತೆ. 75 ವರ್ಷ ಇವರು ಸುಳ್ಳು ಹೇಳಿದ್ದಾರೆ. ನೀವು ಸತ್ಯಹರಿಶ್ಚಂದ್ರರಾಗಿದ್ದರೆ ಜನರು ಯಾಕೆ ನಿಮ್ಮನ್ನು ಮೂಲೆಗುಂಪು ಮಾಡುತ್ತಿದ್ದರು. ನೀವು ಹುಚ್ಚರ ರೀತಿ ಮಾತಾಡಿದ್ದಕ್ಕೆ ಜನ ಸೋಲಿಸಿದ್ದಾರೆ. ಕಾಂಗ್ರೆಸ್ನವರು ಮೋಸಗಾರರು. ಸುಳ್ಳು ಹೇಳಿ ರಾಹುಲ್ ಗಾಂಧಿ ಫಾರಿನ್ಗೆ ಹೋಗುತ್ತಾರೆ ಎಂದು ಕಿಡಿ ಕಾರಿದರು.





