ಚಿಕ್ಕಮಗಳೂರು : ಬಾಬಾಬುಡನ್ಗಿರಿ ಪ್ರದೇಶದಕ್ಕೆ ಪ್ರವಾಸ ಬಂದಿದ್ದ ಕೇರಳದ 16 ವರ್ಷದ ವಿದ್ಯಾರ್ಥಿನಿ ಶ್ರೀನಂದಾ ನಾಪತ್ತೆಯಾಗಿದ್ದು, ಕುಂಟುಬದವರು ಮತ್ತು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯವಳಾದ ಈ 10 ನೇ ತರಗತಿ ವಿದ್ಯಾರ್ಥಿನಿ ತನ್ನ ಕುಟುಂಬದೊಂದಿಗೆ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದಳು. ಬಾಬಾಬುಡನ್ಗಿರಿ ಬೆಟ್ಟಗಳಲ್ಲಿರುವ ಮಣಿಕ್ಯಧಾರ ಜಲಪಾತದ ಸಮೀಪ ಅವಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.
ನಿನ್ನೆ ಸಂಜೆ 5.30ರ ಸುಮಾರಿಗೆ ಜಲಪಾತ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾಗ ವಿದ್ಯಾರ್ಥಿನಿ ಕಾಣೆಯಾಗಿರುವುದು ಕುಟುಂಬದ ಸದಸ್ಯರ ಗಮನಕ್ಕೆ ಬಂದಿದೆ. ರಾತ್ರಿ ಎಂಟು ಗಂಟೆ ತನಕ ಹುಡುಕಿ ನಂತರ ಕುಟುಂಬದವರು ಚಿಕ್ಕಮಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಸ್ಥಳೀಯರು ಸೇರಿ ವಿದ್ಯಾರ್ಥಿನಿಯನ್ನು ರಾತ್ರಿ ಹುಡುಕಾಟ ನಡೆಸಿದ್ದಾರೆ.
ಥರ್ಮಲ್ ಡ್ರೋಣ್ ಬಳಸಿ ಬೆಳಗಿನ ಜಾವ 4.30ರ ತನಕ ಹುಡುಕಾಟ ನಡೆಸಲಾಗಿದೆ. ಇಂದು ಬೆಳಿಗ್ಗೆಯಿಂದಲೂ ಸಹ ಹುಡುಕಾಟದ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ತಿಳಿಸಿದ್ದಾರೆ.




