Mysore
20
overcast clouds
Light
Dark

ಕೃಷಿ ರಾಯಭಾರಿಯಾಗಿ ದರ್ಶನ್‌ ಅವರನ್ನು ಮುಂದುವರೆಸಲು ಸಾಧ್ಯವಿಲ್ಲ: ಎಂ.ಬಿ ಪಾಟೀಲ್‌

ಹುಬ್ಬಳ್ಳಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ನಟ ದರ್ಶನ ಅವರನ್ನು ಕೃಷಿ ರಾಯಭಾರಿಯನ್ನಾಗಿ ಮುಂದುವರೆಸಲು ಸಾಧ್ಯವಿಲ್ಲ ಎಂದು ಶುಕ್ರವಾರ (ಜೂನ್‌.14) ಸಚಿವ ಎಂ.ಬಿ ಪಾಟೀಲ್‌ ತಿಳಿಸಿದರು.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್‌ ಅವರು ಕೊಲೆ ಪ್ರಕರಣದಡಿ ತನಿಖೆ ಎದುರಿಸುತ್ತಿದ್ದಾರೆ ಅಂತವರನ್ನು ಕೃಷಿ ರಾಯಭಾರಿಯನ್ನಾಗಿ ಮುಂದುವರೆಸಲು ಸಾಧ್ಯವಿಲ್ಲ. ಜೈಲಿನಲ್ಲಿ ದರ್ಶನ್‌ ಅವರಿಗೆ ಯಾವುದೇ ವಿಐಪಿ ಸೌಲಭ್ಯಗಳನ್ನು ನಾವು ನೀಡಿಲ್ಲ. ಅವರ ಮೇಲಿನ ಆರೋಪ ಸಾಭೀತಾದರೆ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಸಚಿವ ಎಂಬಿ ಪಾಟೀಲ್‌ ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರಿಗೆ ಪೋಕ್ಸೋ ಪ್ರಕರಣದಡಿ ಜಾಮೀನು ರಹಿತ ವಾರೆಂಟ್‌ ಹೊರಡಿಸಿರುವ ನ್ಯಾಯಾಲಯದ ವಿಚಾರದಲ್ಲಿ ಕಾಂಗ್ರೆಸ್‌ ಹಸ್ತಕ್ಷೇಪ ಮಾಡಿದೆ ಎಂದು ಬಿಜೆಪಿ ಆರೋಪಿಸುತ್ತಿದೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದೊಂದು ಅತ್ಯಂತ ಗಂಭೀರವಾದ ಪ್ರಕರಣವಾಗಿದೆ. ಕಾಯ್ದೆಯ ಅನ್ವಯ ನ್ಯಾಯಾಲಯ ತೀರ್ಪು ನೀಡಲಿದ್ದು, ತಪ್ಪು ಯಾರೇ ಮಾಡಿದ್ದರು ಅದನ್ನು ಕೋರ್ಟ್‌ ನಿರ್ಧರಿಸುತ್ತದೆ. ಈ ವಿಚಾರದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವ ಅಥವಾ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.

ಇನ್ನು ಸಿಎಂ ಖುರ್ಚಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಆಗುವ ಆಸೆ ಎಲ್ಲರಿಗೂ ಇರುತ್ತದೆ ಆದರೆ ಅದನ್ನು ಅಂತಿಮವಾಗಿ ಪಕ್ಷದ ಹೈ ಕಮಾಂಡ್‌ ನಿರ್ಧರಿಸಲಿದೆ ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ. ಹಾಗಾಗಿ ಸಿಎಂ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಜಾಣ್ಮೆಯ ಉತ್ತರ ನೀಡಿದರು.