Mysore
31
scattered clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ದುಬಾರಿ ಜೀವನ- ಅಭಿವೃದ್ಧಿ ಶೂನ್ಯ: ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ

ಬೆಂಗಳೂರು: ಬೊಗಳೆ ಬಿಡುವ ಭರವಸೆಗಳು, ಖಜಾನೆ ಬರಿದು ಮಾಡುವ ಜಾಹೀರಾತುಗಳು. ಕೊಟ್ಟಿದ್ದು ತಲುಪುತ್ತಿಲ್ಲ, ಬಚ್ಚಿಟ್ಟಿದ್ದು ಇನ್ನೂ ಪತ್ತೆಯಾಗಿಲ್ಲ, ಕೊಳ್ಳೆಯೊಡೆಯುವುದು ಕೊನೆಯಾಗುತ್ತಿಲ್ಲ. ದುಬಾರಿ ಜೀವನ-ಅಭಿವೃದ್ಧಿ ಶೂನ್ಯ ಆಡಳಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹೆಜ್ಜೆ ಇಡದ ಎರಡು ವರ್ಷ ಬೆಲೆ ಏರಿಕೆ-ಭ್ರಷ್ಟತೆಯ ಕರಾಳ ಸ್ಪರ್ಶ. ಇದುವೇ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ 2 ವರ್ಷಗಳ ಲೂಟಿ ಸಾಧನೆಗಳು ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಿರುವ ವಿಜಯೇಂದ್ರ ಅವರು ಕಾಂಗ್ರೆಸ್ ನಿರಂತರವಾಗಿ ಲೂಟಿ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಮಿತಿಮೀರಿದ ಭ್ರಷ್ಟಾಚಾರ, ನಿರಂತರ ಬೆಲೆ ಏರಿಕೆ, ಏರುತ್ತಿರುವ ರೈತರ ಆತ್ಮಹತ್ಯೆಗಳು, ಸರಣೀ ಬಾಣಂತಿಯರ ಸಾವುಗಳು, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ನಿರಂತರ ಬೆದರಿಕೆಯಲ್ಲಿರುವ ಹಿಂದೂಗಳ ಜೀವನ, ಮೂಲಸೌಕರ್ಯಭಿವೃದ್ಧಿ ಮೂಲೆಗುಂಪು, ಓಲೈಕೆ ರಾಜಕಾರಣಕ್ಕಾಗಿ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಬೆಂಬಲ, ನಿರುದ್ಯೋಗದ ತಾಂಡವ, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳು ಮತ್ತು ಆಶ್ವಾಸನೆಗಳು ಸಂಪೂರ್ಣ ವಿಫಲ, ಸ್ಥಗಿತಗೊಂಡ ಅಭಿವೃದ್ಧಿ, ಪ್ರಧಾನ ಮಂತ್ರಿ-ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ ಮತ್ತು ಇತರ ರೈತ ಕಲ್ಯಾಣ ಯೋಜನೆಗಳ ರದ್ದು, ಬ್ರ್ಯಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರಾಯಿತು, ಗ್ರೇಟರ್ ಬೆಂಗಳೂರು ವಾಟರ್ ಬೆಂಗಳೂರು, ವಾರಂಟಿಯಿಲ್ಲದ ಗ್ಯಾರಂಟಿಗಳು, 2.5 ಲಕ್ಷ ಕೋಟಿ ರೂ ಸಾಲವೇ ಸಾಧನೆ ಎಂದು ಪೋಸ್ಟ್‌ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Tags:
error: Content is protected !!