ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ನಟ್ಟು, ಬೋಲ್ಟುಗಳನ್ನು ಬಿಗಿಗೊಳಿಸಲು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಫೀಲ್ಡಿಗೆ ಇಳಿದಿದ್ದಾರೆ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿಯೂ, ಕಾಂಗ್ರೆಸ್ಸಿನ ಒಳಜಗಳಕ್ಕೆ ಕೊನೆಮೊದಲು ಎಂಬುದಿಲ್ಲ. ರಾಜ್ಯ ಕಾಂಗ್ರೆಸ್ಸಿನ ನಟ್ಟು ಬೋಲ್ಟುಗಳನ್ನು ಬಿಗಿಗೊಳಿಸಲು ಸ್ವತಃ ಎಐಸಿಸಿ ಅಧ್ಯಕ್ಷರೇ ಫೀಲ್ಡಿಗೆ ಇಳಿದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಹಲಾಲ್ ಬಜೆಟ್ ಕೊನೆಯದ್ದಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಣ ಪ್ರತಿಪಾದಿಸುತ್ತಿದ್ದರೆ, ಇನ್ನೂ 3 ಬಜೆಟ್ ಸಿದ್ದರಾಮಯ್ಯ ಅವರೇ ಮಂಡಿಸಲಿದ್ದಾರೆ ಎಂದು ಸಿದ್ದರಾಮಯ್ಯ ಬಣ ಹೇಳುವ ಮೂಲಕ ಎರಡೂವರೆ ವರ್ಷದ ಒಪ್ಪಂದವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದರಿಂದ ಎರಡೂ ಬಣಗಳಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ ಎಂದು ಟೀಕಿಸಿದೆ.
ಕಾಂಗ್ರೆಸ್ಸಿನ ಈ ಒಳಜಗಳದಿಂದ ರಾಜ್ಯದ ಆಡಳಿತ ಯಂತ್ರ ನಟ್ಟು ಬೋಲ್ಟುಗಳೂ ಕಳಚಿಕೊಂಡಿದೆ. ಅಭಿವೃದ್ಧಿ ಎನ್ನುವುದು ರಾಜ್ಯದಲ್ಲಿ ಮರೀಚಿಕೆಯಾಗಿದೆ. ಒಂದು ಕಡೆ ಬೆಲೆ ಏರಿಕೆ ಮತ್ತೊಂದು ಕಡೆ ಶೂನ್ಯ ಅಭಿವೃದ್ಧಿ, ಒಟ್ಟಿನಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ದಿವಾಳಿಗೊಳಿಸುತ್ತಿದೆ ಎಂದು ಆರೋಪಿಸಿದೆ.





