Mysore
21
mist

Social Media

ಮಂಗಳವಾರ, 03 ಫೆಬ್ರವರಿ 2026
Light
Dark

ಕಾಂಗ್ರೆಸ್‌ ಬೆಲೆ ಏರಿಕೆಯ ಗ್ಯಾರಂಟಿ ಮೂಲಕ ಸರ್ಕಾರ ನಡೆಸುತ್ತಿದೆ: ಬಿಜೆಪಿ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಉಚಿತ ಗ್ಯಾರೆಂಟಿಗಳ ಮೂಲಕ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ಹೊಸ ವರ್ಷಾಚರಣೆಯ ಬೆನ್ನಲ್ಲೇ ಬೆಲೆ ಏರಿಕೆ ಮಾಡುವ ಮೂಲಕ ಬೆಲೆ ಏರಿಕೆಯ ಗ್ಯಾರಂಟಿ ಸರ್ಕಾರ ನಡೆಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಬಿಜೆಪಿ ಕಿಡಿಕಾರಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಕೋಮಾವಸ್ಥೆಯಲ್ಲಿದೆ. ʼಉಚಿತ ಗ್ಯಾರಂಟಿ’ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ‘ಬೆಲೆ ಏರಿಕೆಯ ಗ್ಯಾರಂಟಿ’ ಮೂಲಕ ಸರ್ಕಾರ ನಡೆಸುತ್ತಿದೆ

ದಿವಾಳಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರವು ಹೊಸ ಕ್ಯಾಲೆಂಡರ್ ವರ್ಷದಲ್ಲಿ ಮತ್ತೆ ದರ ಏರಿಕೆ ಮತ್ತು ಬೆಲೆ ಏರಿಕೆಯ ತಮ್ಮ ಹಳೆ ರೆಸಲ್ಯೂಷನ್ ಮೂಲಕ ಸರ್ಕಾರ ನಡೆಸಲು ತೀರ್ಮಾನಿಸಿದಂತಿದೆ ಎಂದು ಕಿಡಿಕಾರಿದೆ.

ಕರ್ನಾಟಕದ ಸಾರಿಗೆ ಇಲಾಖೆಯನ್ನು “ಶಕ್ತಿ” ಹೆಸರಿನಲ್ಲಿ “ನಿಶ್ಯಕ್ತಿ”ಗೊಳಿಸಿದ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಈಗ ಬಸ್ಸಿನ ಚಕ್ರವನ್ನು ಮುನ್ನಡೆಸಲು ಪುರುಷ ಪ್ರಯಾಣಿಕರಿಗೆ ದರ ಏರಿಕೆಯ ಬರೆ ಎಳೆಯಲು ಮುಂದಾಗಿದೆ.

ಇಲಾಖೆ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ, ತುಟ್ಟಿಭತ್ಯೆ, ವೇತನ ಹೆಚ್ಚಳದ ಬಾಕಿ ಪಾವತಿಸದಷ್ಟು ಹೀನಾಯ ಸ್ಥಿತಿಗೆ ಸಾರಿಗೆ ಇಲಾಖೆಯನ್ನು ಕಾಂಗ್ರೆಸ್ ಸರ್ಕಾರ ತಂದು ನಿಲ್ಲಿಸಿದೆ. ‘ಶಕ್ತಿʼಯಿಂದ ಲಾಭವಾಗಿದೆಯೆಂದು ಪುಂಗುವ ಸಚಿವ ರಾಮಲಿಂಗ ರೆಡ್ಡಿ ಅವರೇ, ಲಾಭದಲ್ಲಿದ್ದರೆ ಟಿಕೆಟ್ ದರ ಏರಿಕೆ ಯಾಕೆ ಎಂಬುದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ ? ಎಂದು ಪ್ರಶ್ನಿಸಿದೆ.

ಹೊಸ ವರ್ಷಕ್ಕೆ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬೆಲೆಯೇರಿಕೆಯ ಗಿಫ್ಟ್ ನೀಡಿದೆ. ಮೊದಲೇ ಬೆಲೆಯೇರಿಕೆಯಿಂದ ಬಸವಳಿಯುತ್ತಿರುವ ಕನ್ನಡಿಗರಿಗೆ ಈಗ ಗಾಯದ ಮೇಲೆ ಬರೆ ಎಂಬಂತೆ, ಬಸ್ ದರ ಸಹ ಹೆಚ್ಚಿಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಸಿಎಂ ಸಿದ್ದರಾಮಯ್ಯ ಅವರೇ ಬಸ್ ದರವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸಬೇಡಿ, ಒಂದು ವೇಳೆ ಹೆಚ್ಚಿಸಿದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪ್ರಿಯಾಂಕ್‌ ವಿರುದ್ಧ ಬಿಜೆಪಿ ಕಿಡಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್‌ ಖರ್ಗೆ ಸಾಕ್ಷ್ಯ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಡೆತ್‌ನೋಟ್‌ನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆಯವರ ಆಪ್ತರ ಹೆಸರಿದೆ. ಆ ಆಪ್ತರಿಗೆ ಖರ್ಗೆ ‌ʼಬಾಸ್ʼ ಆಗಿರುವುದರಿಂದಲೇ ಇನ್ನೂ ಆರೋಪಿಗಳ ಬಂಧನವಾಗಿಲ್ಲ ಎಂದು ಕಿಡಿಕಾರಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರ ಮೇಲೆ ಆರೋಪ ಬಂದ ಕೂಡಲೇ ಮಾಧ್ಯಮದೆದುರು ಬಂದು ತನಿಖಾಧಿಕಾರಿ, ನ್ಯಾಯಾಧೀಶರಂತೆ ವರ್ತಿಸಿದ್ದ ಮರಿ ಖರ್ಗೆ ಇಂದು ತಮ್ಮ ಮೇಲೆ ಆರೋಪ ಬಂದಾಗ ಮಾತ್ರ ಸಾಕ್ಷ್ಯದ ನೆಪ ಒಡ್ಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದಕ್ಕೆ ಸಾಕ್ಷ್ಯ ಕೇಳಿದ್ದವರು ಕೊಲೆ ಪ್ರಕರಣಕ್ಕೆ ಸಾಕ್ಷ್ಯ ಕೇಳುವುದರಲ್ಲಿ ಅತಿಶಯವಿಲ್ಲ. ರಾಜೀನಾಮೆ ನೀಡಿ, ತನಿಖೆಗೆ ಎದುರಿಸಿದರೆ ಸಾಕ್ಷ್ಯ ಮುನ್ನಲೆಗೆ ಬರುತ್ತದೆ, ಅದು ಬಿಟ್ಟು ಮಂತ್ರಿ ಪದವಿಯಲ್ಲಿದ್ದುಕೊಂಡು ತನಿಖೆ ನಡೆಸಿ ಎನ್ನುವುದು ಬರೇ ಬೂಟಾಟಿಕೆ ಅಷ್ಟೇ. ಸಚಿವರ ಆಪ್ತರೊಬ್ಬರು ಬಡಪಾಯಿ ಸಚಿವರ ಆಣತಿ, ನಿರ್ದೇಶನ, ಅಭಯಹಸ್ತ ಇಲ್ಲದೆ ಗುತ್ತಿಗೆದಾರನಿಂದ ಕೋಟಿ ಮೊತ್ತದಲ್ಲಿ ಕಿಕ್‌ ಬ್ಯಾಕ್‌ ಪಡೆಯಲು ಸಾಧ್ಯವೇ? ಎಂದು ವಾಗ್ದಾಳಿ ನಡೆಸಿದೆ.

Tags:
error: Content is protected !!