ಬೆಂಗಳೂರು: ವಿಧಾನಸಭೆಯಲ್ಲಿ ಸದನ ನಡೆಯುತ್ತಿರುವಾಗಲೇ ಹನಿಟ್ರ್ಯಾಪ್ ಬಾಂಬ್ ಸಿಡಿಸಿದ ಕಾಂಗ್ರೆಸ್ ಸಚಿವರು ಈಗ ಥಂಡಾ ಹೊಡೆದಿದ್ದಾರೆ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸದನ ನಡೆಯುತ್ತಿರುವಾಗಲೇ ಹನಿಟ್ರ್ಯಾಪ್ ಬಾಂಬ್ ಸಿಡಿಸಿದ ಕಾಂಗ್ರೆಸ್ ಸರ್ಕಾರದ ಸಚಿವರು ಈಗ ಥಂಡಾ ಹೊಡೆದಿದ್ದಾರೆ. ಮಾನವನ್ನು ಪಣಕ್ಕಿಟ್ಟಾದರೂ ರಾಜಕೀಯದಲ್ಲಿ ಉಸಿರಾಡಬೇಕೆಂದು ನಿರ್ಧರಿಸಿರುವ ಕಾಂಗ್ರೆಸ್ಸಿಗರಿಗೆ ಕಾಂಗ್ರೆಸ್ಸಿಗರೇ ಸರಿಸಾಟಿ ಎಂದು ಟೀಕಿಸಿದೆ.
ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಬಗ್ಗು ಬಡಿಯಲು ಸಿಎಂ ಸಿದ್ದರಾಮಯ್ಯ ಬಣ ಹನಿಟ್ರ್ಯಾಪ್ ದಾಳ ಉರುಳಿಸಿದೆ. ಆ ಮೂಲಕ ಮಾನ ಹೋದರೂ ಪರವಾಗಿಲ್ಲ ಸಿಎಂ ಕುರ್ಚಿ ಬಿಡೆವು ಎಂಬ ಸ್ಪಷ್ಟ ಸಂದೇಶವನ್ನು ಸಿದ್ದರಾಮಯ್ಯ ಬಣ ರವಾನಿಸಿದೆ. ಕಾಂಗ್ರೆಸ್ ಪಕ್ಷದೊಳಗಿನ ಕುರ್ಚಿ ಕಿತ್ತಾಟದ ಮುಂದುವರಿದ ಭಾಗವೇ ಹನಿಟ್ರ್ಯಾಪ್ ಪ್ರಕರಣ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದೆ.
ರಾಜ್ಯ ನಿಸ್ತೇಜವಾಗಿದೆ, ಅಭಿವೃದ್ಧಿ ನಿಂತು ಹೋಗಿದೆ, ಗ್ಯಾರಂಟಿಗಳು ಕುಂಟುತ್ತಾ ಸಾಗುತ್ತಿದೆ, ಬರಗಾಲ ಆವರಿಸುತ್ತದೆ ಸರ್ಕಾರ ಮಾತ್ರ ಸಿಡಿ ಬಿಡುಗಡೆ ಕಾರ್ಯಕ್ರಮವನ್ನೇ ರಾಷ್ಟ್ರೀಯ ಯೋಜನೆ ಎಂಬ ರೀತಿಯಲ್ಲಿ ಪರಿಗಣಿಸಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದೆ.




