Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸ್ಪೀಕರ್‌ ಯು.ಟಿ.ಖಾದರ್‌ ಜೊತೆ ಜಗಳಕ್ಕಿಳಿದ ಬಿಜೆಪಿ ಶಾಸಕರು

ಬೆಳಗಾವಿ: ಪಂಚಮಸಾಲಿ ಲಿಂಗಾಯತ ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್‌ಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ಅವಕಾಶ ನಿರಾಕರಿಸಿದ ಕಾರಣ ಸದನದಲ್ಲಿ ಬಿಜೆಪಿ ಶಾಸಕರು ಹಾಗೂ ಆಡಳಿತ ಪಕ್ಷದ ಶಾಸಕರ ನಡುವೆ ತೀವ್ರ ಕಾದಾಟ ಏರ್ಪಟ್ಟಿತು.

ಈ ವೇಳೆ ಸ್ಪೀಕರ್‌ ಯು.ಟಿ.ಖಾದರ್‌ ಅವರು, ಸದನವನ್ನು ಸ್ವಲ್ಪ ಸಮಯ ಮುಂದೂಡಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಸ್ಪೀಕರ್‌ ಜೊತೆಯೇ ಜಗಳಕ್ಕಿಳಿದರು. ಅಲ್ಲದೇ ಸ್ಪೀಕರ್‌ ಕಛೇರಿಯ ಟೇಬಲ್‌ ಗುದ್ದಿ ಏರು ಧ್ವನಿಯಲ್ಲಿ ಜಗಳವಾಡಿದರು.

ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಆಶೋಕ್‌, ಶಾಸಕ ಸುನೀಲ್‌ ಕುಮಾರ್‌, ಅರವಿಂದ್‌ ಬೆಲ್ಲದ್‌, ಸಿದ್ದು ಸವದಿ, ಸುರೇಶ್‌ ಗೌಡ ಸೇರಿದಂತೆ ಇನ್ನಿತರ ಸದಸ್ಯರು ಸ್ಪೀಕರ್‌ ಜೊತೆ ವಾಗ್ವಾದ ನಡೆಸುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಾಂಗ್ರೆಸ್‌ ಶಾಸಕರು ಹಾಗೂ ಸಚಿವರು ಯು.ಟಿ ಖಾದರ್‌ ಪರ ನಿಂತರು. ಹೀಗಾಗಿ ಎರಡೂ ಕಡೆ ವಾದ-ಪ್ರತಿವಾದಗಳು ಜಾಸ್ತಿಯಾಗಿ ಸ್ಪೀಕರ್‌ ಕಚೇರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.

ವಿಜಯಾನಂದ್‌ ಕಾಶಪ್ಪನವರ್‌ ಅವರು ಮಾತನಾಡುವ ವೇಳೆ ಪಂಚಮಸಾಲಿ ಹೋರಾಟಕ್ಕೆ ಸಂಬಂಧಿಸಿದಂತೆ ಇದು ಆರ್‌ಎಸ್‌ಎಸ್‌ ಪ್ರೇರಿತ ಕಲ್ಲತೂರಾಟ ಎಂದು ಹೇಳಿದರು. ಇದಕ್ಕೆ ಕೋಪಗೊಂಡ ಬಿಜೆಪಿ ಶಾಸಕರು ಕಾಶಪ್ಪನವರ್‌ ಹೇಳಿಕೆಯನ್ನು ಖಂಡಿಸಿ ಏರು ಧ್ವನಿಯಲ್ಲಿ ಮಾತನಾಡಿದರು.

ಸ್ಪೀಕರ್‌ ಜೊತೆಗಿನ ಜಗಳಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್‌, ಸ್ಪೀಕರ್‌ ಕಾಂಗ್ರೆಸ್‌ ಏಜೆಂಟ್‌ ರೀತಿ ವರ್ತಿಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಹಾಗೂ ಇನ್ನಿತರರು ಆರ್‌ಎಸ್ಎಸ್‌‌ ಬಗ್ಗೆ ಮಾತನಾಡದೆ ಇದ್ದರೆ ಅವರಿಗೆ ತಿಂದ ಅನ್ನ ಕರಗುವುದಿಲ್ಲ ಅನ್ನಿಸುತ್ತದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

 

Tags: