ಧಾರವಾಡ : ಬಿಜೆಪಿಯವರು ಹತ್ತು ವರ್ಷದಲ್ಲಿ 2500 ಶಾಸಕರನ್ನು ಖರೀದಿಸಿದ್ದಾರೆ. ದುಡ್ಡು ಆಫರ್ ಮಾಡುವುದು ಬಿಜೆಪಿಗೆ ಹೊಸದೇನಲ್ಲ ಅದು ದುಡ್ಡಿನ ಪಕ್ಷ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಫರ್ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರ ಪಕ್ಷದ ಹಣವೇ 7500 ಕೋಟಿ ರೂ.ಇದೆ. ಪಕ್ಷದಿಂದ ಸಂಗ್ರಹ ಆಗಿದ್ದು ಅಷ್ಟಿದೆ
ಕೋವಿಡ್ ಸಮಯದ ಪಿಎಂ ರಿಲೀಫ್ ಫಂಡ್ 30 ಸಾವಿರ ಕೋಟಿ ರೂ. ಆಗಿದೆ. ಅವರು ಗುಜರಾತ್ನಲ್ಲಿ ಸ್ಟೇಡಿಯಂ ಕಟ್ಟಿದ್ದಾರೆ. ಆದರೆ ಅವರಿಗೆ ಒಂದೇ ಒಂದು ಆಸ್ಪತ್ರೆ ಕಟ್ಟಲು ಆಗಿಲ್ಲ ಎಂದು ಕಿಡಿಕಾರಿದರು.
ಗೃಹ ಸಚಿವ ಜಿ. ಪರಮೇಶ್ವರ ಮನೆಯಲ್ಲಿ ಡಿನ್ನರ್ ಪಾರ್ಟಿಗೆ ಶಾಸಕರ, ಸಚಿವರ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಎಲ್ಲ ಕಡೆಯೂ ಆಹ್ವಾನ ಇರುತ್ತದೆ. ಸತೀಶ ಜಾರಕಿಹೊಳಿಗೆ ಅಸಮಾಧಾನ ಆಗಿಲ್ಲ. ಅವರೊಬ್ಬ ಒಳ್ಳೆಯ ಮಾನವೀಯ ಗುಣದ ವ್ಯಕ್ತಿ. ಅಂಬೇಡ್ಕರ್ ವಾದ, ಬಸವ ವಾದ ಇರುವ ನಾಯಕ. ಅವರನ್ನು ಮೂವತ್ತು ವರ್ಷದಿಂದ ನಾನು ನೋಡುತ್ತ ಬಂದಿದ್ದೇನೆ ಎಂದರು.
ರಾಜಕೀಯ ಭಿನ್ನಾಭಿಪ್ರಾಯ ಬಹಿರಂಗವಾಗಿ ಹೇಳುವ ವ್ಯಕ್ತಿಯಲ್ಲ. ಅಸಮಾಧಾನ ಬೇರೆ ರೀತಿ ತೋಡಿ ಕೊಂಡಿದ್ದಾರೆ. ಅದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಇನ್ನು ಏನಾದರೂ ಸ್ಪಷ್ಟನೆ ಬೇಕಿದ್ದರೇ ಅವರನ್ನೇ ಕೇಳಬೇಕು ಎಂದರು.




