ಬೆಂಗಳೂರು: ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ಆದಷ್ಟು ಶೀಘ್ರವಾಗಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ಬಿಜೆಪಿ ನಿಯೋಗ ಮನವಿ ಮಾಡಿದೆ.
ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕರಾದ ಧುರ್ಯೋದನ ಐಹೊಳೆ, ಬಸವರಾಜ್ ಮತ್ತಿಮಡು, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿ ನಾರಾಯಣ್ ಸೇರಿದಂತೆ ಮತ್ತಿತರ ನಿಯೋಗವು ಲೋಕ ಭವನಕ್ಕೆ ತೆರಳಿ ರಾಜ್ಯಪಾಲ ಗೆಹ್ಲೋಟ್ ಅವರಿಗೆ ಮನವಿ ಮಾಡಿಕೊಂಡಿತು.
ಸುಮಾರು 20 ನಿಮಿಷಗಳ ಕಾಲ ನಡೆದ ಮಾತುಕತೆ ಸಂದರ್ಭದಲ್ಲಿ ಒಳಮೀಸಲಾತಿ ಸಂಬಂಧ ಸರ್ಕಾರ ಕಳುಹಿಸಿರುವ ಮಸೂದೆ ಕುರಿತು ಯಾವುದಾದರೊಂದು ನಿರ್ಧಾರ ತೆಗೆದುಕೊಳ್ಳಬೇಕು. ಈ ಮಸೂದೆ ಕಾರ್ಯರೂಪಕ್ಕೆ ಬಂದರೆ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ತೀರ್ಪು ಬಂದು 18 ತಿಂಗಳಾಗಿದೆ. ಪಕ್ಕದ ತೆಲಂಗಾಣ, ಆಂಧ್ರಪ್ರದೇಶ, ದೂರದ ಹರ್ಯಾಣ ಸರ್ಕಾರಗಳು ಆರೇ ತಿಂಗಳಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡಿ ನ್ಯಾಯ ಕೊಟ್ಟವು. ಆದರೆ ಕರ್ನಾಟಕದಲ್ಲಿ ಇನ್ನೂ ಒಳ ಮೀಸಲಾತಿ ಜಾರಿಯಾಗಿಲ್ಲ ಎಂದು ರಾಜ್ಯಪಾಲರಲ್ಲಿ ಬೇಸರ ಹೊರಹಾಕಿದರು.
ನ್ಯಾಯಮೂರ್ತಿ ನಾಗ ಮೋಹನ್ದಾಸ್ ಆಯೋಗ ರಚನೆ ಮಾದಿಗ ಸಮಾಜದ ಬೇಡಿಕೆ ಆಗಿರಲಿಲ್ಲ. ಈ ಹಿಂದೆ ತಯಾರಿಸಿದ ಸದಾಶಿವ ಆಯೋಗದ ವರದಿ ಮತ್ತು ಮಾಧುಸ್ವಾಮಿ ಸಮಿತಿ ವರದಿಯ ದತ್ತಾಂಶಗಳು ಸರ್ಕಾರದ ಬಳಿ ಇದ್ದವು. ಆದರೂ ಸರ್ಕಾರ ನಾಗಮೋಹನ ದಾಸ್ ಆಯೋಗ ರಚಿಸಿ ವರದಿ ಪಡೆಯಲು ನಿಶ್ಚಯಿಸಿತು. ಆರು ತಿಂಗಳು ಶ್ರಮವಹಿಸಿ, 110 ಕೋಟಿ ತೆರಿಗೆ ಹಣ ವ್ಯಯಿಸಿ ಆಯೋಗದಿಂದ ಶಿಫಾರಸುಗಳನ್ನು ಪಡೆಯಲಾಯಿತು ಎಂದು ನಿಯೋಗ ವಿವರಿಸಿತು.





