ಬೆಂಗಳೂರು: ಇಂದು ( ಫೆಬ್ರವರಿ 8 ) ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿವಿಧ ಇಲಾಖೆಯ ಅಧಿಕಾರಿಗಳು ಜನರಿಂದ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ವಿಧಾನಸೌಧದ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಹರಿದುಬಂದಿದ್ದು ತಮ್ಮ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ. ಈ ಜನಸ್ಪಂದನ ಕಾರ್ಯಕ್ರಮಕ್ಕೆ ಯುವಕರ ಜತೆ ಹಿರಿಯರು, ಅಂಗವಿಕಲರೂ ಆಗಮಿಸಿದ್ದಾರೆ.
ಜನರು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಹರಿದುಬಂದ ಕಾರಣ ಮತ್ತೊಂದು ಕೌಂಟರ್ ಅನ್ನು ತೆರೆಯಲಾಗಿದೆ. ಇನ್ನು ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಮೆಜೆಸ್ಟಿಕ್ನಿಂದ ವಿಧಾನಸೌಧದವರೆಗೆ ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳಗ್ಗೆ ಹತ್ತು ಗಂಟೆಗೆ ಶುರುವಾಗಿರುವ ಈ ಜನಸ್ಪಂದನ ಕಾರ್ಯಕ್ರಮ ಸಂಜೆ ಆರರವರೆಗೆ ನಡೆಯಲಿದೆ.





