Mysore
20
clear sky

Social Media

ಭಾನುವಾರ, 08 ಫೆಬ್ರವರಿ 2026
Light
Dark

ಬಸನಗೌಡ ಪಾಟೀಲ್ ಯತ್ನಾಳ್ ಬಣಕ್ಕೆ ತಿರುಗೇಟು ಕೊಟ್ಟ ರೇಣುಕಾಚಾರ್ಯ

ಯಾವುದೇ ಕಾರಣಕ್ಕೂ ವಿಜಯೇಂದ್ರ ಬದಲಾವಣೆ ಇಲ್ಲ: ರೇಣುಕಾಚಾರ್ಯ

ಬೆಂಗಳೂರು:  ಯಾವುದೇ ಕಾರಣಕ್ಕೂ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿರುವ ಬಿ.ವೈ.ವಿಜಯೇಂದ್ರ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ರಾಜಾಧ್ಯಕ್ಷರಾದ ಮೇಲೆ ಹೊಸ ಚೈತನ್ಯ ಬಂದಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡುತ್ತಿದ್ದಾರೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ಹೇಗೆ ಕೆಳಗಿಳಿಸುತ್ತಾರೆ ನಾವು ನೋಡುತ್ತೇವೆ ಎಂದು ಎಚ್ಚರಿಸಿದರು.

ಇಲ್ಲಿಯ ತನಕ ನಾವ ಮಾತನಾಡಬಾರದೆಂದು ಸುಮ್ಮನಿದ್ದೇವು. ಆದರೆ ಕೆಲವರು ಪಕ್ಷದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ವರಿಷ್ಠರು. ಅವರನ್ನು ವಿರೋಧ ಮಾಡುತ್ತಿರುವುದು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಗುಡುಗಿದರು.

ವಿಜಯೇಂದ್ರ ಅನುಭವ, ಸಂಘಟನೆ, ಅವರ ಉಪ ಚುನಾವಣೆ ಗೆಲುವು ಎಲ್ಲಾ ನೋಡಿದ ಮೇಲೆ ಹೈಕಮಾಂಡ್ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ. ಅವರ ವಿರುದ್ದ ಏಕೆ ಮಾತಾಡುತ್ತಾರೆ? ಯಾವುದೇ ಕಾರಣಕ್ಕೂ ಅವರನ್ನು ಕೆಳಗೆ ಇಳಿಸಲು ಸಾಧ್ಯವಿಲ್ಲ. ಅಷ್ಟಕ್ಕೇನೂ ಅವರು ರೆಡಿಮೇಡ್ ಫುಡ್ಡಾ ಎಂದು ಪ್ರಶ್ನಿಸಿದರು.

ರಾಜ್ಯದ ಅಧ್ಯಕ್ಷ ಆದ ಮೇಲೆ ಕಾಲಿಗೆ ಚಕ್ರಕಟ್ಟಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರು ಅಧ್ಯಕ್ಷ ಆದ ಮೇಲೆ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಕಾಂಗ್ರೆಸ್ ಅಧಿಕಾರದಿಂದ ಬೇಸತ್ತಿರುವ ಜನತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾತನಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಒಂದು ವೇಳೆ ಅವರು ತಪ್ಪು ಮಾಡಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಕೊಡಬೇಕು ಹಾದಿಬೀದಿಯಲ್ಲಿ ಮಾತನಾಡುವುದರಿಂದ ಉಪಯೋಗವಿಲ್ಲ. ಒಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರೆ ನಾವು ಒಪ್ಪಿಕೊಳ್ಳುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಬೆಂಗಳೂರಿನಿಂದ ಮೈಸೂರುವರೆಗೆ ನಡೆದ ಮುಡಾ ಪಾದಯಾತ್ರೆ ಯಶಸ್ವಿಯಾಗಿದೆ. ಇದನ್ನು ಸಹಿಸದವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪಾದಯಾತ್ರೆಯನ್ನು ವಿರೋಧಿಸಿದವರು ಪಕ್ಷದ ಉಳಿವಿಗಾಗಿ ಮಾತನಾಡುತ್ತಿರುವುದು ದುರದೃಷ್ಟಕರ. ನಾವು ಮೌನವಾಗಿ ಇರೋರು ನಮ್ಮ ದೌರ್ಬಲ್ಯವಲ್ಲ. ಹಿಂದೆಯೇ ನಾವೆಲ್ಲ ಸೇರುತ್ತೇವೆ ಎಂದು ಹೇಳಿದ್ದವು ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಪರಿಣಾಮ ಬಿಜೆಪಿ ಪರಿಸ್ಥಿತಿ ಏನಾಯಿತು ಎಂಬುದನ್ನು ನೋಡಿಕೊಳ್ಳಬೇಕು.ದಾವಣಗೆರೆ, ಚಿಕ್ಕೋಡಿ ಮತ್ತಿತರ ಕಡೆ ಪಕ್ಷದ ಸೋಲಿಗೆ ಯಡಿಯೂರಪ್ಪ ಅವರೇ ಕಾರಣ. ಪಕ್ಷ ನಿಷ್ಠೆ ಬಗ್ಗೆ ಮಾತನಾಡುವವರು ಮೈಸೂರು, ಕೊಡುಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕವಾಗಿ ಸಭೆ ನಡೆಸುತ್ತಾರೆ ಎಂದರೆ ಏನರ್ಥ ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.

ಪಕ್ಷದ ಉಳುವಿಗಾಗಿ ಮುಂದೆ ನಾವು ಸಭೆ ಮಾಡ್ತೀವಿ. ಪಕ್ಷದ ಪರವಾಗಿ ಮುಂದೆ ನಾವು ಸಭೆ ಸೇರುತ್ತೇವೆ.ಸಂಘ ಪರಿವಾರ, ಹೈಕಮಾಂಡ್ ಒಟ್ಟಾಗಿ ಹೋಗಿ ಅಂತ ಹೇಳಿದ್ದಾರೆ. ಆದರು ಇವರು ಹೀಗೆ ಮಾಡ್ತಿದ್ದಾರೆ.ನಾವು ಹೈಕಮಾಂಡ್ ಬಳಿ ಹೋಗುತ್ತೇವೆ.
ದಾವಣಗೆರೆ, ಚಿಕ್ಕೋಡಿ ಸೋಲಿಗ ಯಾರು ಕಾರಣ? ಮೈಸೂರಿನಲ್ಲಿ ಟಿಕೆಟ್ ಸಿಗದಕ್ಕೆ ವಿಜಯೇಂದ್ರ ಕಾರಣನಾ? ಯಡಿಯೂರಪ್ಪ ಅಧಿಕಾರ ಇದ್ದಾಗ ಇಂದ್ರ ಚಂದ್ರ ಅಂದರು. ಈಗ ಅವರ ವಿರುದ್ದ ಮಾತಾಡುತ್ತೀರಾ ಎಂದು ಪ್ರಶ್ನಿಸಿದರು.

ಶಾಸಕ ಬಿ.ಪಿ.ಹರೀಶ್ ರಾಜಕೀಯಕ್ಕೆ ಜನ್ಮ ಕೊಟ್ಟಿದ್ದು ಯಡಿಯೂರಪ್ಪ. ಇದನ್ನು ಮರೆಯಬಾರದು. ಅವರ ವಿರುದ್ದ ಮಾತಾಡ್ತೀರಾ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

 

Tags:
error: Content is protected !!