ಕೊಪ್ಪಳ: ಸ್ವಪಕ್ಷದ ಬಗ್ಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅಸಮಾಧಾನ ಹೊರಹಾಕಿದ್ದು, ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ಜಿಲ್ಲಾ ನ್ಯಾಯಾಲಯ ಕಟ್ಟಡ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ”ಬಿಜೆಪಿ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಿ.ಸಿ. ಪಾಟೀಲ್, ಸಚಿವ ಗೋವಿಂದ ಕಾರಜೋಳ ಅವರಿದ್ದಾಗಲೂ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಸಲು ಆಗಲಿಲ್ಲ” ಅಸಮಾಧಾನ ಹೊರಹಾಕಿದ್ದಾರೆ.
ನಾನು ಅಂದು ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಹೊರ ಬರಬೇಕೆಂದಿದ್ದೆ. ಆದರೆ ಪಕ್ಷದ ಚೌಕಟ್ಟಿನಲ್ಲಿ ಇರಬೇಕಿದ್ದರಿಂದ ಅಲ್ಲೇ ಇದ್ದೆ. ಒಮ್ಮೊಮ್ಮೆ ಗುಲಾಮಿತನ ಎಂದು ಅನ್ನಿಸಿ ಬಿಡುತ್ತದೆ. ನಮ್ಮ ಜಿಲ್ಲೆಯಲ್ಲಿ ನನ್ನನ್ನೂ ಸೇರಿದಂತೆ ಒಬ್ಬರು ಡೈನಾಮಿಕ್ ಲೀಡರ್ ಇಲ್ಲದೇ ಇರುವುದು ಜಿಲ್ಲೆಯ ಅಭಿವೃದ್ದಿಗೆ ಹಿನ್ನಡೆ ಆಗಲು ಕಾರಣ ಎಂದು ಹೇಳಿದ್ದಾರೆ.
ಇನ್ನು ಸಂಗಣ್ಣ ಕರಡಿ ಅವರ ಈ ಹೇಳಿಕೆ ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ. ಅವರು ಈ ಹಿಂದೆ ”ಸಂಸದರಿಗೆ ಟಿಕೆಟ್ ಇಲ್ಲ” ಎಂದು ಹೇಳಿದ್ದ ಸ್ವಪಕ್ಷದ ಶಾಸಕ ಯತ್ನಾಳ್ ವಿರುದ್ಧವೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.





