ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಗೆ ಈಗ 18 ವರ್ಷ ತುಂಬಿದ್ದು, ಫಲಾನುಭವಿಗಳಿಗೆ ಮೊತ್ತ ಮಂಜೂರಾಗಿದೆ.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಭಾಗ್ಯಲಕ್ಷ್ಮೀ 2006-07ನೇ ಸಾಲಿನಲ್ಲಿ ನೋಂದಣಿಯಾಗಿತ್ತು. ಫಲಾನುಭವಿಗಳಿಗೆ ಈಗ 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್ಐಸಿಯಿಂದ ಮೊತ್ತ ಮಂಜೂರಾಗಿದೆ ಎಂದು ತಿಳಿಸಿದೆ.
ಫಲಾನುಭವಿಗಳಿಗೆ ಒಂದು ಲಕ್ಷ ರೂಪಾಯಿ ಸಿಗಲಿದ್ದು, ಇದನ್ನು ಹೆಣ್ಣು ಮಕ್ಕಳ ಉನ್ನತ ವ್ಯಾಸಂಗ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಸಬಹುದು ಎಂದು ಹೇಳಿದೆ.





