Mysore
23
broken clouds
Light
Dark

ಬಿಜೆಪಿ ಬಂಡಾಯ ನಾಯಕರಿಗೆ ಖಡಕ್‌ ಸೂಚನೆ ಕೊಟ್ಟ ಚುನಾವಣಾ ಚಾಣಕ್ಯ

ಬೆಂಗಳೂರು: ಲೋಕಸಭೆ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸಲು ರಾಜ್ಯ ರಾಜಾಧಾನಿಗೆ ಬಂದಿಳಿದಿರುವ ಕೇಂದ್ರ ಗೃಹಮಂತ್ರಿ ಅಮಿತ್‌ ಶಾ, ಇಂದು (ಏ.2) ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ-ಜೆಡಿಎಸ್‌ ನಾಯಕರ ಜತೆ ಸಭೆ ನಡೆಸಿದರು.

ರಾಜ್ಯ ಬಿಜೆಪಿ-ಜೆಡಿಎಸ್‌ ನಾಯಕರಿಗೆ ಅಮಿತ್‌ ಶಾ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಬಂಡಾಯ ಇರುವ ಕ್ಷೇತ್ರ ನಾಯಕರ ಜೊತೆಗೆ ಸಭೆ ಮಾಡಿದ್ದು, ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದು ಬಂಡಾಯ ನಾಯಕರಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಅದರಲ್ಲೂ ಮುಖ್ಯವಾಗಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಇದ್ದ ಬಂಡಾಯವನ್ನು ಅಮಿತ್‌ ಶಾ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಈ ನಾಲ್ಕು ಕ್ಷೇತ್ರಗಳಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ಗೇಲ್ಲಬೇಕು ಎಂದು ನಾಯಕರುಗಳಿಗೆ ಅಮಿತ್‌ ಶಾ ಗೆಲುವಿನ ಗುರಿ ನೀಡಿದ್ದಾರೆ.

ಮತದಾನ ದಿನದಂದು ಜೆಡಿಎಸ್‌ನವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ ಹಾಕಿಸಿ. ಸಣ್ಣ ವಿಷಯಗಳನ್ನು ದೊಡ್ಡದು ಮಾಡಬೇಡಿ ಎಂದಿದ್ದಾರೆ. ಈ ಸೂಚನೆಯಂತೆ ಬಂಡಾಯ ನಾಯಕರು ಸಹ ಮೋದಿ ಮತ್ತು ದೇಶಕ್ಕಾಗಿ ಈ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.