ಶಿವಮೊಗ್ಗ: ನಟ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದು, ಏಪ್ರಿಲ್ 15 ಅವರು ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಿಮ್ಮನೆ ರತ್ನಾಕರ್ ಮುಂತಾದವರು ಗೀತಾಗೆ ಸಾಥ್ ನೀಡಿದ್ದಾರೆ. ಗೀತಾ ಪರವಾಗಿ ಅವರ ಪತಿ ಶಿವರಾಜ್ಕುಮಾರ್ ಅವರು ಜಿಲ್ಲೆಯಾದ್ಯಂತ ಪ್ರಚಾರ ಮಾಡುತ್ತಿದ್ದಾರೆ.
ಗೀತಾ ನಾಮಪತ್ರ ಸಲ್ಲಿಸಿದ ಬಳಿಕ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿ, ಶಿವಮೊಗ್ಗದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ ಇಷ್ಟೊಂದು ಜನರು ಪ್ರೀತಿ-ವಿಶ್ವಾಸದಿಂದ ಬಂದಿರುವುದು ನೋಡಿದರೆ ಶಿವಮೊಗ್ಗದಲ್ಲಿ ಬದಲಾವಣೆ ಬೇಕು ಅಂತ ಅವರೆಲ್ಲರೂ ಬಯಸಿದ್ದಾರೆ. ಜನ ನಗುವಿನ ಮುಖದಲ್ಲಿ ಬದಲಾವಣೆ ಕೇಳುತ್ತಿದ್ದಾರೆ ಎಂಬುದು ನನ್ನ ಭಾವನೆ. ನಿಮ್ಮಲ್ಲರ ಆಶೀರ್ವಾದ ಬೇಕು. ಗೀತಾ ಖಂಡಿತಾ ಗೆಲ್ಲುತ್ತಾರೆ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಇಂದು ನಾನು ನಾಮಪತ್ರ ಸಲ್ಲಿಸಿ ಬಂದಿದ್ದೇನೆ. ನಮ್ಮ ಪಕ್ಷದ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಎಲ್ಲ ಕಾರ್ಯಕರ್ತರಿಗೆ ನನ್ನ ನಮಸ್ಕಾರ. ಮತದಾರರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಅವರೆಲ್ಲರ ಆಶೀರ್ವಾದ ನಮ್ಮ ಪಕ್ಷ ಮತ್ತು ನನ್ನ ಮೇಲೆ ಇರಲಿ ಅಂತ ಕೇಳಿಕೊಳ್ಳುತ್ತೇನೆ ಎಂದು ಗೀತಾ ಶಿವರಾಜ್ಕುಮಾರ್ ಹೇಳಿದ್ದಾರೆ.





