Mysore
33
scattered clouds

Social Media

ಭಾನುವಾರ, 12 ಏಪ್ರಿಲ 2026
Light
Dark

ಉಡುಪಿಯಲ್ಲೊಂದು ಅಪರೂಪದ ಘಟನೆ : ಗ್ಯಾಸ್‌ ಓಟಿಪಿ ವ್ಯಕ್ತಿ ಜೀವ ಉಳಿಸಿದ್ದೇಗೆ?

ಉಡುಪಿ: ತೋಟದ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಜೀವ ಹೋಗದಂತೆ ಹೋರಾಡಿದ 62 ವರ್ಷದ ವೃದ್ಧನನ್ನು ಗ್ಯಾಸ್ ಸಿಲಿಂಡರ್‌ನ ಓಟಿಪಿ ಸಂದೇಶವೇ ಬದುಕಿಸಿದೆ.

ಉಡುಪಿಯ ಕೊಡವೂರು ವಾರ್ಡ್‌ನ ಕಂಬ್ಳಕಟ್ಟ ಎಂಬ ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಶ್ರೀನಿವಾಸ್ ಆಚಾರ್ಯ (62) ಎಂಬುವವರು, ಅನಾರೋಗ್ಯದಿಂದ ಸುಧಾರಿಸಿಕೊಂಡ ಬಳಿಕ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು. ಬಾವಿಯ ಪಂಪ್‌ನಲ್ಲಿ ಕಸ ತುಂಬಿದ್ದರಿಂದ ಅದನ್ನು ಸ್ವಚ್ಛಗೊಳಿಸಲು ಹೋದಾಗ ಹಗ್ಗ ತುಂಡಾಗಿ ಸುಮಾರು 15-20 ಅಡಿ ಆಳದ ಬಾವಿಗೆ ಬಿದ್ದುಬಿಟ್ಟಿದ್ದರು.

ಬಾವಿಯಲ್ಲಿ ಪೈಪ್ ಹಿಡಿದುಕೊಂಡು ಮೂರು ದಿನಗಳ ಕಾಲ ಕುಳಿತಿದ್ದ ಶ್ರೀನಿವಾಸ್ ಅವರು ಬೊಬ್ಬೆ ಹೊಡೆದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಆ ಸಮಯದಲ್ಲಿ ಅವರ ಗ್ಯಾಸ್ ಸಿಲಿಂಡರ್‌ಗೆ ಹೊಸ ಸಿಲಿಂಡರ್ ಬುಕ್ ಮಾಡಲು ಓಟಿಪಿ ಬಂದಿತ್ತು.

ಗ್ಯಾಸ್ ಏಜೆನ್ಸಿ ಸಿಬ್ಬಂದಿ ಗಣೇಶ್ ಅವರು ಸಿಲಿಂಡರ್ ತಲುಪಿಸಲು ಮನೆಗೆ ಬಂದಾಗ ವೃದ್ಧರು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿತು. ಸ್ಥಳೀಯರ ಸಹಾಯದಿಂದ ಹುಡುಕಾಡಿದಾಗ ಬಾವಿಯಲ್ಲಿ ಬಿದ್ದಿರುವುದು ಪತ್ತೆಯಾಯಿತು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವೃದ್ಧನನ್ನು ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಿಸಿದರು.

ಸದ್ಯ ಶ್ರೀನಿವಾಸ್ ಆಚಾರ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

 

Tags:
error: Content is protected !!