ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಮೊದಲ ಬಾರಿಗೆ 4 ದಿನಗಳ ಕಾಲ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಇಂದು ಫೆ.24 ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.27 ರಿಂದ ಮಾ.2 ರವರೆಗೆ 4 ದಿನಗಳ ಕಾಲ ಪುಸ್ತಕ ಮೇಳ ನಡೆಯಲಿದೆ. ಜೊತೆಗೆ ಸಂಜೆಯ ವೇಳೆ ಸಾಧುಕೋಕಿಲ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿಗಳು ನಡೆಯುತ್ತವೆ ಎಂದು ತಿಳಿಸಿದರು.
ಲೇಖಕರು ಪುಸ್ತಕ ಬಿಡುಗಡೆ ಮಾಡುತ್ತಾರೆ. ಸರ್ಕಾರದ ಎಲ್ಲ ಭಾಷಾ ಆಕಾಡೆಮಿಗಳಿಗೆ ಒಂದೊಂದು ಪುಸ್ತಕ ಸ್ಟಾಲ್ ಮೀಸಲು ಕೊಡುತ್ತೇವೆ ಎಂದರು.
ಸುಮಾರು 15 ವಿಷಯಗಳಲ್ಲಿ ಸಂವಾದ ಕಾರ್ಯಕ್ರಮ ಇರಲಿದ್ದು, ನಿತ್ಯ 4 ವಿಷಯಗಳ ಮೇಲೆ ಸಂವಾದಗಳು ನಡೆಯಲಿವೆ. ಸಂವಿಧಾನ, ಕ್ರೀಡೆ, ಕನ್ನಡ, ಸಾಹಿತ್ಯ, ಮಕ್ಕಳ ಸಾಹಿತ್ಯ, ಚಲನಚಿತ್ರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಂವಾದ ನಡೆಯಲಿದೆ ಎಂದು ತಿಳಿಸಿದರು.
ವಿವಿಧ ಶಾಲೆಗಳಿಂದ ಬರುವ ಮಕ್ಕಳಿಗೆ ಅಸೆಂಬ್ಲಿ ನೋಡಲು ಅವಕಾಶವಿರುತ್ತದೆ. ಆಯ್ಕೆ ಸಮಿತಿಯ ಆಯ್ಕೆ ಮಾಡಿದ 5 ಜನರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಸಾರ್ವಜನಿಕರಿಗೆ ಮಾ.2ರವರೆಗೆ ಮುಕ್ತ ಅವಕಾಶವಿದ್ದು, ಮಾ.3 ರಂದು ಶಾಸಕರಿಗೆ ಪುಸ್ತಕ ಮೇಳ ಇರಲಿದೆ. ಪುಸ್ತಕಮೇಳಕ್ಕೆ ರಾಜ್ಯಪಾಲರಿಗೂ ಆಹ್ವಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.





